ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕೆ.ಹೆಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಾದ 10ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ `ಉಡಾನ್ ಗಾಳಿಪಟ ಹಬ್ಬ’ ಶುಕ್ರವಾರ ಜರುಗಿತು.
ಈ ಉತ್ಸವದಲ್ಲಿ 84 ತಂಡಗಳು ಭಾಗವಹಿಸಿದದ್ದವು. ಗಾಳಿಪಟ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ, ದೀರ್ಘ ಕಾಲ ಹಾರಿದ ಗಾಳಿಪಟ, ಅತ್ಯುನ್ನತ ಹಾರಾಟ ಮಾಡಿದ ಗಾಳಿಪಟ ಹಾಗೂ ಅಲಂಕೃತ ಗಾಳಿಪಟ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ, ಪದಕಗಳನ್ನು ನೀಡಲಾಯಿತು.
ಇತ್ತೀಚೆಗೆ ನಡೆದ ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ವೇದಿಕೆಯಲ್ಲಿ ಪಾರಿತೋಷಕ ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ್ ನಾಡಗೌಡರ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ವಹಿಸಿ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಕೋರ್ಸ್ ಗಳು ಪ್ರಾರಂಭವಾಗಿ 10 ವರ್ಷಗಳು ತುಂಬಿವೆ. 10ನೇ ವಾರ್ಷಿಕೋತ್ಸವದ ಆರಂಭವನ್ನು ಇಂತಹ ಉತ್ಸಾಹಪೂರ್ಣ ಕಾರ್ಯಕ್ರಮದಿಂದ ಆಚರಿಸುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ. ರಾಜು ಜಿ ಎಂ, ನೋಡಲ್ ಅಧಿಕಾರಿಗಳಾದ ಡಾ. ಈಶ್ವರ ಸಿಂಗ್, ವಿದ್ಯಾರ್ಥಿ ಬಳಗದ ಮಾರ್ಗದರ್ಶಕರಾದ ಡಾ. ಸಮತಾ, ಡಾ. ಕರಿಗೌಡರ, ಡಾ. ಮಹಾಂತೇಶ ಪಾಟೀಲ, ಡಾ. ಭೀಮಸಿಂಗ್, ಡಾ. ಶಿವರೆಡ್ಡಿ ಉಪಸ್ಥಿತರಿದ್ದರು.