ಮೈಸೂರು:- ಇಲ್ಲಿನ ಉದಯಗಿರಿ ಗಲಭೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಸತೀಶ್ ಗಡಿಪಾರು ಪ್ರಕ್ರಿಯೆಗೆ ಕೋರ್ಟ್ ತಡೆ ನೀಡಿದ್ದು, ಪೊಲೀಸರಿಗೆ ಭಾರೀ ಹಿನ್ನಡೆಯಾಗಿದೆ.
ಉದಯಗಿರಿ ಠಾಣೆ ಮೇಲೆ ಕಲ್ಲು ತೂರಾಟಕ್ಕೆ ಕಾರಣನಾದ ಆರೋಪಿ ಸತೀಶ್ ಗಡಿಪಾರಿಗೆ ಪೊಲೀಸರು ಸಿದ್ಧತೆ ನಡೆಸಿದ್ದರು. ಆದ್ರೆ, ಪೊಲೀಸರ ಕ್ರಮ ಪ್ರಶ್ನಿಸಿ ಸತೀಶ್ ಪರ ವಕೀಲ ಮೈಸೂರು ಜಿಲ್ಲಾ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಸತೀಶ್ ಅರ್ಜಿಯನ್ನು ಪುರಸ್ಕರಿಸಿದ್ದು, ಆರೋಪಿ ಸತೀಶ್ನನ್ನು ಗಡಿಪಾರು ಮಾಡದಂತೆ ಕೋರ್ಟ್ ಆದೇಶ ಹೊರಡಿಸಿದೆ.
ಘಟನೆ ಹಿನ್ನೆಲೆ:-
ಮುಸ್ಲಿಂ ಧರ್ಮದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಹರಿಬಿಟ್ಟ ಪ್ರಕರಣದ ಆರೋಪಿ ಸತೀಶ್ ಗಡಿಪಾರಿಗೆ ಮೈಸೂರು ನಗರ ಪೊಲೀಸರು ಮುಂದಾಗಿದ್ದು, ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈ ಬಗ್ಗೆ ಸತೀಶ್ ಪರ ವಕೀಲ ಭಾಸ್ಕರ್ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಚಾರಣೆಗೆ ಭಾಗಿಯಾಗಿ ಆಕ್ಷೇಪಣೆ ಸಲ್ಲಿಸಿದ್ದರು. ಅದಾದ ಬಳಿಕ ಪೊಲೀಸರ ನಿರ್ಧಾರ ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.