ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಎದುರಿನಲ್ಲಿ ವಾಹನಗಳನ್ನು ಬೇಕಾಬಿಟ್ಟಿಯಾಗಿ ಪಾರ್ಕಿಂಗ್ ಮಾಡಿರುವದು ಹಾಗೂ ಸಿಬ್ಬಂದಿಗಳ ವಸತಿ ಗೃಹಗಳ ಆವರಣದಲ್ಲಿ ಬೇರೆ ಬೇರೆ ಊರಿಗೆ ಹೋಗುವ ಜನರು ತಮ್ಮ ವಾಹನಗಳಿಗೆ ಪಾರ್ಕಿಂಗ್ ಜಾಗೆ ಮಾಡಿಕೊಂಡಿರುವದನ್ನು ಕಂಡ ಶಾಸಕ ಡಾ.ಚಂದ್ರು ಲಮಾಣಿ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಶಾಸಕರು ಆಸ್ಪತ್ರೆಯ ಎದುರಿನಲ್ಲಿ ಸಾಕಷ್ಟು ವಾಹನಗಳನ್ನು ಆಸ್ಪತ್ರೆಗೆ ಹೋಗಲು ಬಾರದಂತೆ ನಿಲ್ಲಿಸಿರುವದನ್ನು ನೋಡಿ, ಇದೇನು ಅವ್ಯವಸ್ಥೆ? ವಾಹನಗಳನ್ನು ಒಂದೆಡೆ ಸರಿಯಾಗಿ ಪಾರ್ಕಿಂಗ್ ಮಾಡಿದರೆ ಆಸ್ಪತ್ರೆಗೆ ಬರುವವರಿಗೆ ಅನುಕೂಲ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅಂಬ್ಯುಲೆನ್ಸ್ ಬರಲು ಅನುಕೂಲವಾಗುತ್ತದೆ. ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಅನಧಿಕೃತ ವಾಹನ ನಿಲುಗಡೆಗೆ ದಂಡ ವಿಧಿಸಿ ಇಲ್ಲವೆ ಈ ಜಾಗೆಯಲ್ಲಿ ಪಾರ್ಕಿಂಗ್ ಮಾಡಿದರೆ ಅದಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸಿ ಎಂದು ಶಾಸಕರಿಗೆ ಮನವಿ ಮಾಡಿದರು.