ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಶಿವಾನುಭವ ಗೋಷ್ಠಿಯಲ್ಲಿ ಚಿಂತನೆಗೊಳಪಡುವ ಶಿವಶರಣರ ತತ್ವದಾರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತರಾಗಬೇಕು ಎಂದು ಡಾ. ಕೊಟ್ಟೂರೇಶ್ವರ ಸ್ವಾಮೀಜಿಗಳು ಸಲಹೆ ನೀಡಿದರು.
ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಡೆದ 310ನೇ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಕೌಟುಂಬಿಕವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶಿವಾನುಭವದಲ್ಲಿಯ ಶಿವಶರಣರ ಜೀವನ ಚರಿತ್ರೆಯ ಸಂದೇಶಗಳು ಮಾರ್ಗದರ್ಶಕವಾಗುತ್ತವೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶರಣರ ವಚನಗಳ ಸಾರವನ್ನು ಅರ್ಥೈಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಗೀತ ಕಲಾವಿದ ಹಾಗೂ ಹಿರಿಯರಾದ ಕೆ.ಬಿ. ವೀರಾಪೂರ ಮಾತನಾಡಿ, ಶಿವಾನುಭವ ಕಾರ್ಯಕ್ರಮಗಳು ನಮ್ಮ ದ್ವಂದ್ವಾತೀತ ಬದುಕಿನಿಂದ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ನಿವೃತ್ತ ಶಿಕ್ಷಕ ರಾಮಣ್ಣ ಬೆಳಧಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದಲ್ಲಿ ಪ್ರತಿ ತಿಂಗಳು ಶಿವಾನುಭವ ಗೋಷ್ಠಿ ನಡೆಯುತ್ತಿದ್ದು, ಸಮಾಜದಲ್ಲಿಯ ಸಾಧನೆ ಮಾಡಿದ ಶೈಕ್ಷಣಿಕ, ಸಾಮಾಜಿಕ, ಕೃಷಿ, ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು 310 ತಿಂಗಳಿಂದ ಗುರುತಿಸಿ ಗೌರವ ಸಮ್ಮಾನಿಸುತ್ತಾ ಬರಲಾಗುತ್ತಿದೆ. ಭಕ್ತರು ಸಹಾಯ, ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.
ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಸುರೇಶ ಹಿರೇಹಾಳ, ಬಸವರಾಜ ಹರಕುಣಿ, ವರ್ಷಾ ಪಟ್ಟೇದ, ಕಿರಣ ಕರೇಗಲ್ಲ, ಯಲ್ಲಪ್ಪ ಚೂರಿ, ಸಂಚನಾ ಅಗಸನಕೊಪ್ಪ ಸನ್ಮಾನಿಸಲಾಯಿತು. ಸೋಮಣ್ಣ ಬಾಲಬಸವರ, ಶೇಖಪ್ಪ ಪೂಜಾರ, ಮಹಾದೇವಪ್ಪ ಯಾಳವಾಡ, ಶಿವಪುತ್ರಪ್ಪ ಯಾಳವಾಡ, ಈರಣ್ಣ ಯಾಳವಾಡ, ಸೋಮಣ್ಣ ಬಾಲಬಸವರ, ಶೇಖಪ್ಪ ಪೂಜಾರ ವೇದಿಕೆಯಲ್ಲಿದ್ದರು. ವೆಂಕಟೇಶ ಜುಂಜಣ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.