ಗದಗ:- 2025ರ ಕೇಂದ್ರದ ಬಜೆಟ್ ಕೇವಲ ಬಿಹಾರ ಚುನಾವಣೆಯ ಪ್ರಣಾಳಿಕೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಗದಗನಲ್ಲಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಕಮರುವ ರೀತಿಯಲ್ಲಿ ಬಜೆಟ್ ಬಂದಿದೆ. ನಾವು ಕೊಟ್ಟಿರುವ ಟ್ಯಾಕ್ಸ್ ಎಷ್ಟು? ಆದರೆ ಕರ್ನಾಟಕಕ್ಕೆ ಕೇಂದ್ರ ಕೊಟ್ಟಿರುವ ಪಾಲೆಷ್ಟು? ಎಂದು ಹೇಳುವ ಮೂಲಕ ಇದು ಕೇಂದ್ರದ ಮಲತಾಯಿ ಧೋರಣೆ ಎಂದು ಟೀಕಿಸಿದರು.
ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವ ವಿಚಾರವನ್ನು ವಿಧಾನಸಭೆ, ಪರಿಷತ್ ನಲ್ಲಿ ಚರ್ಚೆ ಮಾಡಿದ್ದೇವೆ ಆದರೂ ಪರಿಣಾಮವೇ ಆಗಿಲ್ಲ. ಧಕ್ಷಿಣ ಭಾರತಕ್ಕೆ ಭಾರೀ ಅನ್ಯಾಯ ಮಾಡಿದ ಬಜೆಟ್ ಇದಾಗಿದೆ. ಈ ಹಿಂದೆ ಭದ್ರಾ ಯೋಜನೆಗೆ 5000 ಕೋಟಿ ಕೊಟ್ಟಿದ್ರು, ಮತ್ತಷ್ಟು ಕೊಡುವ ನಿರೀಕ್ಷೆ ಇತ್ತು.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡ್ತಾರೆ ಅನ್ಕೊಂಡಿದ್ವಿ. ಚುನಾವಣೆಯಲ್ಲಿ ಮಾತಾಡಿದ್ದನ್ನ ಈಗ ಮಾತಾಡಿಲ್ಲ. ಅತ್ಯಂತ ನಿರಾಶೆ ತಂದ ಬಜೆಟ್, ಅದರಲ್ಲೂ ಕರ್ನಾಟಕಕ್ಕೆ ಕರಾಳವಾಗಿದೆ ಎಂದರು.
ಇನ್ನೂ ಮಂಡಿನೋವು ಕಾರಣದಿಂದ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸ ರದ್ದಾಗಿದೆ. ಎರಡು ದಿನ ವಿಶ್ರಾಂತಿ ಹೇಳಿರುವ ಕಾರಣ ಕಾರ್ಯಕ್ರಮ ರದ್ದಾಗಿದೆ. ಬಹುಬೇಗ ತಮ್ಮ ಕರ್ತವ್ಯದ ಮೇಲೆ ಹಾಜರಾಗುತ್ತಾರೆ ಎಂದು ಎಚ್ ಕೆ ಪಾಟೀಲ್ ಹೇಳಿದ್ದಾರೆ.



