ಚಿಕ್ಕಮಗಳೂರು: ಪ್ರಾಣಿಗಳಿಗೆ ಗೌರವವನ್ನು ಸಲ್ಲಿಸುವುದು ನಮ್ಮ ಸನಾತನ ಧರ್ಮದ ಆಚರಣೆಗಳಲ್ಲಿ ಒಂದಾಗಿದೆ. ಅದರಲ್ಲೂ ಗೋವಿಗೆ ಪೂಜನೀಯ ಸ್ಥಾನಮಾನ ನೀಡಿ, ಅತ್ಯಂತ ಪವಿತ್ರ ಪ್ರಾಣಿ ಎನ್ನಲಾಗುತ್ತೆ. ಹಿ೦ದೂ ಸಂಪ್ರದಾಯದ ಪ್ರಕಾರ, ಗೋವು 33 ಕೋಟಿ ದೇವತೆಗಳ ಆವಾಸ ಸ್ಥಾನವಾಗಿ, ಆಧ್ಯಾತ್ಮದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಗೋವನ್ನು ಗೋಮಾತೆ ಅಂತಲೂ ಕರೆಯಲಾಗುತ್ತೆ. ಆದ್ರೆ ಅಂತ ಹಸುಗಳ ಜೊತೆಯೇ ಕೆಲ ಕಿಡಿಗೇಡಿಗಳು ಹೀನಾಯವಾಗಿ ವರ್ತಿಸಿದ್ದಾರೆ.
ಹೌದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶೇಖರಪ್ಪ ಎಂಬುವವರಿಗೆ ಸೇರಿದ ಹಸುವನ್ನು ರಾತ್ರೋರಾತ್ರಿ ಹಸು ಕಳವು ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆದರೆ, ಕಳ್ಳತನ ಯತ್ನ ವಿಫಲವಾದಾಗ ರೋಷದಿಂದ ಹಸುವಿನ ಕೆಚ್ಚಲು ಕತ್ತರಿಸಿ ಕಳ್ಳರು ಪರಾರಿಯಾಗಿದ್ದಾರೆ. ಪರಿಣಾಮವಾಗಿ ಹಸು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ.
ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಿರಂತರವಾಗಿ ಜಾನುವಾರುಗಳ ಕಳ್ಳತನ ಮಾಡಲಾಗುತ್ತಿದೆ. ಆದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.