ವಿಜಯಸಾಕ್ಷಿ ಸುದ್ದಿ, ಗದಗ: ಪರಿಶಿಷ್ಟ ಜಾತಿಗಳಲ್ಲಿನ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದ ವಿರುದ್ಧ ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿ ಹಾಗೂ ಜಿಲ್ಲಾ ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ವೃತ್ತದಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಹಾಗೂ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಬುಧವಾರದಂದು 10ನೇ ದಿನದತ್ತ ತಲುಪಿದೆ.
ಮಂಗಳವಾರ, ಗದಗ ಜಿಲ್ಲೆಯ 72 ತಾಂಡಾಗಳ ಪೈಕಿ ನಿಗದಿತ ವೇಳಾಪಟ್ಟಿಯಂತೆ ನಭಾಪುರ, ಡೋಣಿ ತಾಂಡಾ, ಬಸಾಪುರ, ಮಾಗಡಿ, ಮಾಗಡಿ ತಾಂಡಾ, ಅದ್ರಳ್ಳಿ ತಾಂಡಾ, ಹೊಳೆಆಲೂರ ತಾಂಡಾ ಹಾಗೂ ದಿಂಡೂರ ತಾಂಡಾಗಳ ನೂರಾರು ಬಂಜಾರರು ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಒಳಮೀಸಲಾತಿ ವರ್ಗೀಕರಣದಲ್ಲಿ ಸರ್ಕಾರ ತಾರತಮ್ಯ ತೋರಿದ್ದು, ಬಂಜಾರ ಸಮುದಾಯದವರಿಗೆ ಘೋರ ಅನ್ಯಾಯ ಮಾಡಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.
ನಭಾಪುರ ತಾಂಡಾ, ಡೋಣಿ ತಾಂಡಾ, ಬಸಾಪುರ ತಾಂಡಾ, ಮಾಗಡಿ ತಾಂಡಾ, ಅದ್ರಳ್ಳಿ ತಾಂಡಾ, ಹೊಳೆಆಲೂರ ತಾಂಡಾ ಹಾಗೂ ದಿಂಡೂರ ತಾಂಡಾಗಳ ಬಂಜಾರ ಸಮುದಾಯದ ಮುಖಂಡರು, ನಾಯಕರು, ಕಾರಭಾರಿಗಳು ಹಾಗೂ ಹಿರಿಯರು ಪಂಚರ ನೇತೃತ್ವದಲ್ಲಿ ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದಲ್ಲಿ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ಗದಗ, ರೋಣ, ನರಗುಂದ ಹಾಗೂ ಗಜೇಂದ್ರಗಡ ತಾಲೂಕುಗಳ ಬಂಜಾರ ಬಾಂಧವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀನಿವಾಸ್ ನಾಯಕ್, ರಮೇಶ್ ಕಾರಭಾರಿ, ಹನುಮಪ್ಪ ಲಮಾಣಿ, ಹನುಮಂತ್ ನಾಯಕ್, ರಾಜಣ್ಣ ಕಾರಭಾರಿ, ಕೆ.ಸಿ. ನಭಾಪುರ, ಐ.ಎಸ್. ಪೂಜಾರ, ಟಿ.ಡಿ. ಪೂಜಾರ, ಧನುರಾಮ ತಂಬೂರಿ, ಕೃಷ್ಣಪ್ಪ ಲಮಾಣಿ, ಸಂತೋಷ ಪವಾರ್, ಆಗ್ರಪ್ಪ ನಾಯಕ್, ಚೆನ್ನಪ್ಪ ಕಾರಭಾರಿ, ಶಿವಪ್ಪ ಲಮಾಣಿ, ಶಶಿಕುಮಾರ್ ಜಾದವ್, ರಮೇಶ್ ಪವಾರ್, ಕಿರಣ್ ರಾಠೋಡ್, ಭೀಮಪ್ಪ ನಾಯಕ್, ಭೋಜಪ್ಪ ಲಮಾಣಿ, ವಿಠ್ಠಲ್ ಕಾರಭಾರಿ, ಹಾಮಜಪ್ಪ ಬಡಿಗೇರ್, ಕುಶಾಲ್ ರಾಠೋಡ್, ಧಾಮಲಪ್ಪ ನಾಯಕ್, ಲಕ್ಷ್ಮಣ ನಾಯಕ್, ಪರಮೇಶ್ ಲಮಾಣಿ, ಲಕ್ಷ್ಮಣ ಲಮಾಣಿ, ಭೋಜಪ್ಪ ನಾಯಕ್, ದ್ಯಾಮಣ್ಣ ಕಾರಭಾರಿ, ಹರಿಯಪ್ಪ, ಉಮೇಶ್ ನಾಯಕ್, ಪರಮೇಶ್ ಕಾರಭಾರಿ, ನರಸಪ್ಪ ಡಾವ, ಶೇಖಪ್ಪ ನಾಯಕ್, ಗೆಮಪ್ಪ ಕಾರಭಾರಿ ಹಾಗೂ ಗೋವಿಂದ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕರ್ನಾಟಕ ಬಂಜಾರ ಹಕ್ಕು ಸಂರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಾಂತ್ ಅಂಗಡಿ ಮಾತನಾಡಿ, ಪರಿಶಿಷ್ಟ ಜಾತಿಗಳ ಅವೈಜ್ಞಾನಿಕ ಒಳಮೀಸಲಾತಿ ವರ್ಗೀಕರಣದಿಂದ ಕೊಲಂಬೊ ಸಮುದಾಯದ ಜನರಿಗೆ ಭಾರೀ ಅನ್ಯಾಯವಾಗಿದೆ. ದಮನಿತರನ್ನು ಮುಖ್ಯವಾಹಿನಿಗೆ ತರಬೇಕಾದ ಸರ್ಕಾರಗಳು ಅವರನ್ನು ಮತ್ತೆ ಮುಖ್ಯವಾಹಿನಿಯಿಂದ ದೂರಕ್ಕೆ ತಳ್ಳಿವೆ. ಸರ್ಕಾರವು ಒಳಮೀಸಲಾತಿ ವರ್ಗೀಕರಣ ಮಾಡುವಾಗ ನಿಜವಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೇ, ರಾಜಕೀಯ ಒತ್ತಡದಡಿ ತೀರ್ಮಾನ ಕೈಗೊಂಡಿದೆ. ನಾವು ಪ್ರತಿದಿನ ವಿಭಿನ್ನ ರೀತಿಯ ಪ್ರತಿಭಟನೆಗಳ ಮೂಲಕ ಸರ್ಕಾರಕ್ಕೆ ಎಚ್ಚರ ನೀಡುತ್ತಿದ್ದೇವೆ. ಬಂಜಾರ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.



