ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಆಹಾರ ಇಲಾಖೆ ಹಲವು ತಿಂಗಳ ಬಳಿಕ ಹೊಸ ರೇಷನ್ ಕಾರ್ಡ್ ಅರ್ಜಿ ತಿದ್ದುಪಡಿಗೆ 2 ದಿನಗಳ ಕಾಲ ಅವಕಾಶ ಕಲ್ಪಿಸಿದ್ದು, ಅವಕಾಶದ ಸದುಪಯೋಗಕ್ಕಾಗಿ ದಿನವಿಡೀ ಕಾಯ್ದರೂ ಪ್ರಯೋಜನವಾಗದೇ ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಸೇರಿ ಪಂಚಗ್ಯಾರೆಂಟಿ ಯೋಜನೆಗಳಿಂದಾಗಿ ರೇಷನ್ ಕಾರ್ಡ್ಗೆ ಸಾಕಷ್ಟು ಬೇಡಿಕೆ ಬಂದಿದೆ. ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ಗಾಗಿ, ತಿದ್ದುಪಡಿಗಾಗಿ ವರ್ಷದಿಂದ ಕಾಯುತ್ತಿದ್ದಾರೆ. ಜು.2 ಮತ್ತು 3ರಂದು ಕೇವಲ 2 ಗಂಟೆಗಳ ಕಾಲ ಮಾತ್ರ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಹೊಸ ಅರ್ಜಿ, ಹೆಸರು ಸೇರ್ಪಡೆ, ಕುಟುಂಬದ ಯಜಮಾನಿಯ ಹೆಸರು ಬದಲಾವಣೆ, ಸದಸ್ಯರ ಹೆಸರು ಡಿಲಿಟ್, ಕೆವೈಸಿಗೆ ಅವಕಾಶ ಕಲ್ಪಿಸಿತ್ತು. ಆದರೆ ಈ ವ್ಯವಸ್ಥೆಯ ಸರ್ವರ್ ಸಮಸ್ಯೆ ತಲೆದೋರಿದ್ದರಿಂದ ನಸುಕಿನಿಂದಲೇ ನೂಕಾಟ-ತಳ್ಳಾಟದ ಸರದಿಯಲ್ಲಿ ನಿಂತ ಜನರ ಸಮಸ್ಯೆ ಬಗೆ ಹರಿಯಲೇ ಇಲ್ಲ. ಇದರಿಂದ ಕೇಂದ್ರದವರೂ ಸಹ 2 ದಿನಗಳ ಕಾಲ ಜನರನ್ನು ನಿಯಂತ್ರಿಸಲಾಗದೇ ಯಾತನೆ ಅನುಭವಿಸಿದರು.
ಆಹಾರ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ ರೇಷನ್ ಕಾರ್ಡ್ ಅರ್ಜಿಗೆ ಸಂಬಂಧಪಟ್ಟಂತೆ ರೇಷನ್ ಕಾರ್ಡ್ನಲ್ಲಿ ಹೊಸ ಸದಸ್ಯರ ಸೇರ್ಪಡೆ ಹಾಗೂ ಹೊಸ ರೇಷನ್ ಕಾರ್ಡ್ಗೆ ಸದ್ಯ ಎಲ್ಲರಿಗೂ ಅವಕಾಶ ಕಲ್ಪಿಸಿಲ್ಲ.
ಕೇವಲ ತುರ್ತು ಚಿಕಿತ್ಸೆ ಪಡೆಯುವವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅದಕ್ಕಾಗಿ ಆಹಾರ ನಿರೀಕ್ಷಕರಿಂದ ಅನುಮತಿ ಪಡೆದಿರಬೇಕಂತೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಕೊರತೆಯಿಂದ ಕೇವಲ ಸಾಮಾಜಿಕ ಜಾಲತಾಣ, ಅವರಿವರ ಮಾತಿನ ಆಧಾರದಲ್ಲಿ ಎಲ್ಲರೂ ಮುಗಿಬಿದ್ದಿದ್ದರು. ಆದರೆ ಎಲ್ಲ ಕೆಲಸ ಬಿಟ್ಟು ದಿನವಿಡೀ ಕಾಯ್ದರೂ ಯಾರೊಬ್ಬರ ಅರ್ಜಿಯೂ ಸ್ವೀಕೃತವಾಗದ್ದರಿಂದ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಾ ಮನೆಯತ್ತ ನಡೆದರು.
ಈ ವೇಳೆ ಅರ್ಜಿ ಸಲ್ಲಿಸಲು ಬಂದಿದ್ದ ಬಸವರಾಜ ಎಂಬುವರು, ಸರ್ಕಾರ ರೇಷನ್ ಕಾರ್ಡ್ ಬಗ್ಗೆ ಬೇಕಂತಲೇ ಸಂಪೂರ್ಣ ನಿರ್ಲಕ್ಷ ತೋರುತ್ತಿದೆ. ನಿಜವಾಗಲೂ ಬಡವರ ಬಗ್ಗೆ ಕಾಳಜಿ ಇದ್ದರೆ ಅರ್ಹರಿಗೆ ರೇಷನ್ ಕಾರ್ಡ್ ಕೊಡಲು, ಸಮಸ್ಯೆ ಬಗೆಹರಿಸಲು ಅವಕಾಶ ಕಲ್ಪಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ತಹಸೀಲ್ದಾರ ವಾಸುದೇವ ಸ್ವಾಮಿಯವರನ್ನು ಸಂಪರ್ಕಿಸಿದಾಗ, ಎರಡು ದಿನಗಳ ಕಾಲ ತುರ್ತು ವೈದ್ಯಕೀಯ ಕಾರಣಗಳಿಗೆ ಮಾತ್ರ ರೇಷನ್ ಕಾರ್ಡ್ ತಿದ್ದುಪಡಿ, ಹೊಸ ಕಾರ್ಡ್ಗೆ ಅರ್ಜಿ ಪ್ರಕ್ರಿಯೆಗೆ ಅವಕಾಶ ನೀಡಿದ್ದರೂ ಸರ್ವರ್ ಸಮಸ್ಯೆಯಿಂದ ಒಂದೆರಡು ಅರ್ಜಿ ಮಾತ್ರ ಸ್ವೀಕೃತವಾಗಿವೆ. ಈ ಸಮಸ್ಯೆ ರಾಜ್ಯಾದ್ಯಂತ ಇದೆ. ಆದರೆ ತಪ್ಪು ಮಾಹಿತಿಯಿಂದ ಸಾಕಷ್ಟು ಜನರು ಸೇವಾ ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಸೂಕ್ತ ಪರಿಹಾರ ಸಿಗಲಿದೆ ಎಂದರು.