ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಇಲ್ಲಿನ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಮ್.ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಗಡಿ ಕನ್ನಡ ಸಂಘದ 10ರ ಸಂಭ್ರಮದ ಅಂಗವಾಗಿ ಜರುಗಿದ `ಅಗಡಿ ಕನ್ನಡ ಹಬ್ಬ’ದಲ್ಲಿ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ವಿದ್ಯಾರ್ಥಿಗಳಲ್ಲಿನ ಕನ್ನಡ ನಾಡು-ನುಡಿ-ಸಂಸ್ಕೃತಿ ಮೇಲಿನ ಅಭಿಮಾನ ಮತ್ತು ಪ್ರೀತಿಯನ್ನು ಅಭಿವ್ಯಕ್ತಗೊಳಿಸಿತು.
ಡೊಳ್ಳು ಕುಣಿತ, ತಾಯಿ ಭುವನೇಶ್ವರಿ, ಕಿತ್ತೂರ ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರರ ವೇಷಭೂಷಣ ಧರಿಸಿದ್ದ ವಿದ್ಯಾರ್ಥಿಗಳು ಡೊಳ್ಳು ಕುಣಿತಕ್ಕೆ ಸೊಗಸಾಗಿ ನೃತ್ಯ ಮಾಡಿ ಸಂತಸಪಟ್ಟರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವು ಮಹಾವಿದ್ಯಾಲಯದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಜೊತೆಗೂಡಿ ಕವಿ ಕೆ.ಎಸ್. ನಿಸಾರ್ ಅಹಮ್ಮದ ರಚಿಸಿದ ಜೋಗದ ಸಿರಿ ಬೆಳಕಿನಲ್ಲಿ, ತಾಯಿ ನಿತ್ಯೋತ್ಸವ ಹಾಡಿನೊಂದಿಗೆ ಪ್ರಾರಂಭಗೊಂಡಿತು. ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ಹಾಡುಗಳು, ಯಕ್ಷಗಾನ, ಕೋಲಾಟ, ಕಂಸಾಳೆ ನೃತ್ಯ, ಭರತನಾಟ್ಯ, ಭಸ್ಮಾಸುರ ವಧೆ, ನಾಗವಲ್ಲಿ, ದಿಂಡಿ ನೃತ್ಯಗಳು ಎಲ್ಲರ ಗಮನ ಸೆಳೆದವು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ, ಡಾ. ಹಯವದನ, ಡಾ. ರಾಜಶೇಖರ್ ಮೂಲಿಮನಿ, ಡಾ. ಸುಜಾತಾ ಸಂಗೂರ, ಡಾ. ಸುಭಾಷ್ ಮೇಟಿ, ಡಾ. ವಿಕ್ರಮ ಶಿರೋಳ್, ಪ್ರೊ. ಆರ್.ಎಂ. ಪಾಟೀಲ, ಪ್ರೊ. ಸೋಮಶೇಖರ್ ಕೆರಿಮನಿ, ಪ್ರೊ. ಪ್ರತಿಮಾ ಮಹಾಪುರುಷ, ಪ್ರೊ. ಶಂಭುಲಿಂಗಪ್ಪ, ಪ್ರೊ. ಶಂಭುಲಿಂಗಪ್ಪ, ಷಣ್ಮುಖ ಜಿ, ಶ್ರೀದೇವಿ ಹೆಚ್, ಡಾ. ಗಿರೀಶ ಯತ್ತಿನಹಳ್ಳಿ, ರವಿ ಪ್ರಕಾಶ್ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿಹಾರಿಕಾ ರಾಣಿ, ನಂದೀಶ್, ಉಷಾ ದೇವರಮನಿ, ಚೇತನ್, ಪಟ್ಟೆದ ಕಾರ್ಯಕ್ರಮ ನಿರ್ವಹಿಸಿದರು.



