ವಿಜಯಸಾಕ್ಷಿ ಸುದ್ದಿ, ಗದಗ : ವಚನ ಸಾಹಿತ್ಯ ಸುಲಭವಾಗಿ ಅರ್ಥವಾಗುವ ಮತ್ತು ಅಪಾರ ಜ್ಞಾನವನ್ನು ನೀಡುವ ಸಾಹಿತ್ಯವಾಗಿದ್ದು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವಚನಗಳು ಮಾರ್ಗದರ್ಶಿಯಾಗಿವೆ.
ಆದ್ದರಿಂದ ವಿದ್ಯಾರ್ಥಿಗಳು ಪಠ್ಯ ವಿಷಯದ ಜೊತೆಗೆ ವಚನಗಳನ್ನು ಅಧ್ಯಯನ ಮಾಡಬೇಕು ಎಂದು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಶ್ರೀದೇವಿ ಶೆಟ್ಟರ್ ನುಡಿದರು.
ಅವರು ನಗರದ ತೋಂಟದಾರ್ಯ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನದ ಅಂಗವಾಗಿ ಅಕ್ಕಮಹಾದೇವಿ ಯೋಗ ವಿಜ್ಞಾನಕೇಂದ್ರವು ಆಯೋಜಿಸಿದ್ದ ವಚನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷರಾದ ಶಿವಲೀಲಾ ಅಕ್ಕಿ ಮಾತನಾಡಿ, ವಚನ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುವ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಕಾರ್ಯ ಅಭಿನಂದನೀಯ. ಇಂಥ ಮೌಲಿಕ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯವಾಗಿರುತ್ತದೆ.
ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಶಿಕ್ಷಕರಿಗೆ ಗೌರವ ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ತಂದೆ-ತಾಯಿಗಳೊಂದಿಗೆ, ಗುರು-ಹಿರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸುವ ವಚನಸಾಹಿತ್ಯ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುತ್ತವೆ. ಸಾಮಾಜಿಕ ಸ್ವಾಸ್ತ್ಯವನ್ನು ಕಾಪಾಡುವ ಕೆಲಸವನ್ನು ವಚನಗಳು ಮಾಡುತ್ತವೆ ಎಂದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆ ಮೇಲೆ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಅಕ್ಕಮಹಾದೇವಿ ಚಟ್ಟಿ, ಸುವರ್ಣ ವಸ್ತçದ, ವಿಶಾಲಾಕ್ಷಿ ಕುರಗೋಡ, ಕವಿತಾ ನಾರಗುಣ್ಣವರ ಉಪಸ್ಥಿತರಿದ್ದರು. ಸುರೇಖಾ ಕುಂಬಾರಗೇರಿಮಠ ನಿರೂಪಿಸಿದರೆ, ಸುಮಾ ಹಿರೇಮಠ ವಂದಿಸಿದರು. ಶಿಕ್ಷಕರಾದ ಕೆ.ಎಂ ಗೌಡರ, ಬಶೀರಾ ಕಲೇಬಾಯಿ, ಮಂಜುಳಾ ಭೂಮಣ್ಣವರ, ಶಶಿಧರಗೌಡ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಶ್ವಗುರು ಬಸವೇಶ್ವರರು ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಸಮಸಮಾಜವನ್ನು ನಿರ್ಮಿಸಲು ಶ್ರಮಿಸಿದ ಮಹಾತ್ಮರು. ಇತ್ತೀಚೆಗೆ ಕರ್ನಾಟಕ ಸರ್ಕಾರ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಶ್ಲಾಘನೀಯವಾಗಿದೆ. ಮಕ್ಕಳನ್ನು ಪ್ರಜ್ಞಾವಂತ ನಾಗರಿಕರನ್ನಾಗಿಸುವ ನಿಟ್ಟಿನಲ್ಲಿ ವಚನ ಸಾಹಿತ್ಯದ ಅಧ್ಯಯನ ಮಹತ್ವಪೂರ್ಣವಾಗಿದೆ ಎಂದು ಶ್ರೀದೇವಿ ಶೆಟ್ಟರ್ ನುಡಿದರು.