ಬೆಂಗಳೂರು:- ವೈಕುಂಠ ಏಕಾದಶಿ ಹಿನ್ನೆಲೆ ಬೆಂಗಳೂರಿನ ದೇವಸ್ಥಾನಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದ್ದು, ಇಸ್ಕಾನ್ನಲ್ಲಿ ರಾತ್ರಿ 11 ಗಂಟೆ ವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಶುಭ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಅಪಾರ ಸಂಖ್ಯೆಯಲ್ಲಿ ಬೆಂಗಳೂರಿನ ಹಲವು ದೇವಸ್ಥಾನಗಳಿಗೆ ಭಕ್ತರು ತೆರಳುತ್ತಿದ್ದಾರೆ. ಪ್ರಮುಖವಾಗಿ, ಬೆಂಗಳೂರಿನ ಕೋಟೆ ವೆಂಕಟರಮಣಸ್ವಾಮಿ ದೇವಸ್ಥಾನ, ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಮತ್ತು ಇಸ್ಕಾನ್ ದೇವಸ್ಥಾನಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.
ಇಸ್ಕಾನ್ ದೇವಸ್ಥಾನದಲ್ಲಿ ನಸುಕಿನ ಜಾವ 3:45ರಿಂದಲೇ ವಿಶೇಷ ಪೂಜೆ, ಅಭಿಷೇಕ, ಲಕ್ಷ್ಮಿ ವೆಂಕಟೇಶ್ವರನಿಗೆ ವಿಶೇಷ ಮಂಗಳರಾತಿ ನೆರವೇರಿಸಲಾಗುತ್ತಿದೆ. ದರ್ಶನಕ್ಕೆ ಬರುವ ಜನರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಪೂಜೆ ಬಳಿಕ ಭಕ್ತಾದಿಗಳಿಗೆ ಲಡ್ಡು, ಪೊಂಗಲ್ ವಿತರಣೆ ಮಾಡಲಾಗುತ್ತಿದೆ.
ಇನ್ನೂ ಇಂದು ರಾತ್ರಿ 11 ಗಂಟೆ ವರೆಗೂ ಇಸ್ಕಾನ್ ದೇವಸ್ಥಾನದಲ್ಲಿ ಭಕ್ತರಿಗೆ ಮುಕ್ತವಾಗಿ ದರ್ಶನ ಸಿಗಲಿದೆ ಇಸ್ಕಾನ್ ಆಡಳಿತ ಮಂಡಳಿ ತಿಳಿಸಿದೆ. ಇಂದು ಒಂದೂವರೆ ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಹಿರಿಯ ನಾಯರಿಕರಿಗೆ ದ್ವಾರದಿಂದ ದೇವಸ್ಥಾನದ ವರೆಗೂ ವಾಹನ ವ್ಯವಸ್ಥೆ ಮಾಡಲಾಗಿದೆ.


