ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ವಾಲ್ಮೀಕಿ ಸಮುದಾಯದವರು ಅನಾದಿ ಕಾಲದಿಂದಲೂ ಸ್ವಾಮಿ ನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.
ಹರಪನಹಳ್ಳಿ ಪಟ್ಟಣದ ನಟರಾಜ ಕಲಾ ಭವನದಲ್ಲಿ ತಾಲೂಕು ಆಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ಹಾಗೂ ಪುರಸಭೆಯ ಸಹಯೋಗದಲ್ಲಿ ಮಂಗಳವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯವನ್ನು ಜಗತ್ತಿಗೆ ನೀಡಿ ಮಾನವೀಯ ಮೌಲ್ಯಗಳ ಸಂಬಂಧಗಳು ಮತ್ತು ಕೌಟುಂಬಿಕ ಜೀವನದ ಸಾರವನ್ನು ಜನತೆಗೆ ತಿಳಿಸಿದ್ದಾರೆ. ಈ ಸಮುದಾಯದ ಜನತೆಯು ಅನಾದಿ ಕಾಲದಿಂದ ಯುದ್ಧ ತರಬೇತಿಯಲ್ಲಿ ನೈಪುಣ್ಯತೆ ಹೊಂದಿದ ಧೈರ್ಯಶಾಲಿಗಳಾಗಿದ್ದಾರೆ ಎಂದರು.
ಎಸಿ ಚಿದಾನಂದ ಗುರುಸ್ವಾಮಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ರಾಮಾಯಣ ಮಹಾಕಾವ್ಯವನ್ನು ಜಗತ್ತಿನಾದ್ಯಂತ ಸಾಕಷ್ಟು ಕವಿಗಳ ಅವರದೇ ಭಾಷೆಯಲ್ಲಿ ಅನುವಾದ ಮಾಡಿ ಸಾಮಾನ್ಯ ಜನರಿಗೂ ಅರ್ಥವಾಗುವ ಸಂದೇಶ ನೀಡಿದ್ದಾರೆ. ಅದರಲ್ಲಿ ಕುವೆಂಪು ಅವರು ಬರೆದ ರಾಮಾಯಣ ದರ್ಶನಂ ಕೃತಿ ಅತ್ಯುತ್ತಮವಾಗಿದೆ ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಮಹಿಳಾ ಅಧ್ಯಕ್ಷೆ ಹೆಚ್.ಟಿ. ವನಜಾಕ್ಷಿ ಶಿವಯೋಗಿ ಮಾತನಾಡಿ, ಹರಪನಹಳ್ಳಿಯನ್ನು ಅನೇಕ ಪಾಳೆಗಾರರು ಸುಭದ್ರ ಆಡಳಿತ ನಡೆಸಿದ ಇತಿಹಾಸವಿದೆ. ಈ ಸಮುದಾಯವು ಪ್ರೀತಿ, ವಿಶ್ವಾಸ, ಹಾಗೂ ಸರ್ವಜನಾಂಗದವರೊಟ್ಟಿಗೆ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಕುತಂತ್ರಿಗಳ ಹುಟ್ಟಡಗಿಸಲು ಪ್ರತಿಯೊಬ್ಬರೂ ಶಿಕ್ಷಣವಂತರಾಗಿ ಎಂದರು.
ಸಣ್ಣ ಹಾಲಪ್ಪ, ಪುರಸಭೆ ಸದಸ್ಯರಾದ ಎಂ.ವಿ. ಅಂಜಿನಪ್ಪ, ರೆಹಮಾನ್ ಸಾಬ್, ಉದ್ದಾರ ಗಣೇಶ, ಭರತೇಶ, ಗಿರಜ್ಜಿ ನಾಗರಾಜ್, ನಿಚ್ಚವ್ವನಹಳ್ಳಿ ಭೀಮಪ್ಪ, ಲಕ್ಕಳ್ಳಿ ಹನುಮಂತ, ಶಾಸಕರ ಆಪ್ತ ಸಹಾಯಕ ಮತ್ತೂರು ಬಸವರಾಜ್, ನೇತ್ರಾವತಿ, ಲಕ್ಷ್ಮೀ ಚಂದ್ರಶೇಖರ್, ತಹಸೀಲ್ದಾರ್ ಬಿ.ವಿ. ಗಿರೀಶ್ ಬಾಬು, ಇಓ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಇಬ್ರಾಹಿಂ ಸಾಬ್ ಡಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭೀಮಪ್ಪ, ಸಮಾಜ ಕಲ್ಯಾಣಾಧಿಕಾರಿ ಎಸ್ ಗಂಗಪ್ಪ, ಸಿಡಿಪಿಓ ಅಶೋಕ್, ಕೃಷಿ ಅಧಿಕಾರಿ ವಿ.ಸಿ. ಉಮೇಶ್, ಸಮಾಜದ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ್, ಸಮಾಜದ ಮುಖಂಡರಾದ ಎಚ್.ಕೆ. ಹಾಲೇಶ್, ಶಿರಹಟ್ಟಿ ದಂಡೆಪ್ಪ, ಪಟ್ನಾಮದ್ ನಾಗರಾಜ್ ಹಾಗೂ ಇತರರಿದ್ದರು.
ವಿಶೇಷ ಉಪನ್ಯಾಸ ನೀಡಿದ ಯುವ ಸಾಹಿತಿ ಪೂಜಾರ್ ಬಸವರಾಜ್, ಭವಿಷ್ಯದ ಪೀಳಿಗೆ ಸಮಾಜದ ಪ್ರತಿಯೊಬ್ಬರ ಮನೆಯಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಗಳನ್ನು ಇರಿಸಿಕೊಳ್ಳಬೇಕು. ಇಂದಿನ ಆಧುನಿಕ ತಂತ್ರಜ್ಞಾನದಿಂದ ನಮ್ಮ ಇತಿಹಾಸ-ಪರಂಪರೆ ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.



