ವಿಜಯಸಾಕ್ಷಿ ಸುದ್ದಿ, ಬಳ್ಳಾರಿ: ಮೌಲ್ಯಯುತ ವಿಚಾರಗಳು ಮಾನವನ ಪ್ರಗತಿಗೆ ಪೂರಕ ಎಂದು ಬಳಗಾನೂರು ಶಿವಶಾಂತವೀರ ಶರಣರು ಹೇಳಿದರು.
ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪರಮ ಪೂಜ್ಯಶ್ರೀ ಶಿವಶಾಂತವೀರ ಶರಣರ ತುಲಾಭಾರ ಹಾಗೂ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಬಳ್ಳಾರಿಯ ಬಸವಭವನದಲ್ಲಿ ಚಾಲನೆ ನೀಡಿ ಅವರು ಆಶೀರ್ವಚನ ನೀಡುತ್ತಿದ್ದರು.
ಮಹಾತ್ಮರು, ಶರಣರು, ಸಾಧುಗಳು ಮತ್ತು ಸಂತರ ನುಡಿಗಳಲ್ಲಿ ಮೌಲ್ಯಗಳು, ಆದರ್ಶಗಳು ಮತ್ತು ಸಂಸ್ಕಾರಗಳು ಅಡಗಿರುತ್ತವೆ. ಮುಗ್ಧವಾದ ಭಕ್ತಿ, ಶ್ರದ್ಧೆಯ ಸ್ಮರಣೆ, ವಿಶ್ವಾಸಗಳಿಂದ ಮಹಾತ್ಮರನ್ನು, ಶರಣರನ್ನು ಸ್ಮರಿಸಿದಲ್ಲಿ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಶರಣರು ಕಾಡು ಸೇರಿ ಸಾಧನೆ ಮಾಡಿದವರಲ್ಲ. ನಾಡಿನಲ್ಲಿ, ಜನರೊಂದಿಗೆ ಇದ್ದು ಸಾಧನೆಯನ್ನು ಮಾಡಿ ಸದ್ಗತಿಯನ್ನು ಸಾಧಿಸಿದವರು. ಗುರುವಿಗೆ ಶರಣಾದೊಡೆ ಸಾಧನೆ ಮತ್ತು ಯಶಸ್ಸು ಹಿಂಬಾಲಿಸುತ್ತವೆ. ಜೀವನದ ಸಾರ್ಥಕತೆಗೆ ಮಾನವೀಯತೆ, ಸೇವೆ, ತ್ಯಾಗ, ಕಾಯಕ ಅತಿ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ಅಲ್ಲಂ ವೀರಭದ್ರಪ್ಪ ಅವರು, ಚಿಕೇನಕೊಪ್ಪ ಚನ್ನವೀರ ಶರಣರು ನಡೆದಾಡುವ ದೇವರು. ಅವರ ತಪಸ್ಸಿನ ಸಾಧನೆ, ದೈವೀ ಶಕ್ತಿ ನಮ್ಮನ್ನೆಲ್ಲರನ್ನೂ ಇಲ್ಲಿ ಒಗ್ಗೂಡಿಸಿದೆ ಎಂದರು.
ಈಶ್ವರಿ ಮತ್ತು ತೇಜಸ್ವಿನಿ ಪ್ರಾರ್ಥನೆ ಸಲ್ಲಿಸಿದರು. ಪಂಡಿತ ಶಿವಲಿಂಗಶಾಸ್ತ್ರಿಗಳು ಸ್ವಾಗತ ಕೋರಿದರು. ಉಪನ್ಯಾಸಕ ಬಸವರಾಜ ಅಮಾತಿ ಪ್ರಾಸ್ತಾವಿಕ ಭಾಷಣ ಮಾಡಿದರು. ಶರಣ ಕುಮಾರ್ ಕೊತ್ತಲಚಿಂತ ಮತ್ತು ಸುಧಾಕರ ಸಂಗೀತ ಸೇವೆ ಸಲ್ಲಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ಬಿ. ಸಿದ್ದಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.
ಶ್ರೀಗಳಿಗೆ ತುಲಾಭಾರ ಸೇವೆಯನ್ನು ಗುರು ಕಂಪ್ಯೂಟರ್ಸ್ನ ಪೂಜಾ-ಮೃತ್ಯುಂಜಯ ಬಾಬು ಹಾಗೂ ಕುಟುಂಬ, ಜುನ್ನಾ ಅಮೃತ-ಜುನ್ನಾ ಬಸವರೆಡ್ಡಿ ಕುಟುಂಬ, ಧರಣಿ ಡಿ, ಶಿವರಾಂ ಟಿ, ನಾಗರಾಜ ಡಿ ಹಾಗೂ ಸೋಮಶೇಖರ್ ಡಿ ಕುಟುಂಬ, ಕರಿನಾಗಶೆಟ್ರು ಸುಮಂಗಳ ಚನ್ನಪ್ಪ ಕುಟುಂಬ, ಸಿದ್ದಲಿಂಗಮ್ಮ ಹಾಗೂ ಮಕ್ಕಳಾದ ತಿಪ್ಪೇಸ್ವಾಮಿ, ಕರಿಬಸಪ್ಪ, ಲತಾ, ಪುಷ್ಪ, ಹಾಗೂ ಕುಟುಂಬ, ಶ್ರೀಧರಗಡ್ಡೆಯ ದಿವಂಗತ ಲದ್ದೆ ಸಿದ್ದರಾಮಪ್ಪ ಇವರ ಧರ್ಮಪತ್ನಿ ಲದ್ದೆ ಸಿದ್ದವೀರಮ್ಮ ಮತ್ತು ಮಕ್ಕಳು, ಜಿ. ಶಕುಂತಲಾ ಜಿ. ಮಲ್ಲಿಕಾರ್ಜುನ ಹಾಗೂ ಜಿ. ಸುನೀತ, ಜಿ. ರಘುನಾಥ್ ಮತ್ತು ಮಕ್ಕಳು, ಸಂಗನಕಲ್ಲುನ ಮಂಗಳ ಮತ್ತು ನಿಜಲಿಂಗಯ್ಯ ಸ್ವಾಮಿ ಹಾಗೂ ವಿದ್ಯಾಶ್ರೀ, ಹೆಚ್. ಕಿರಣ, ಹೆಚ್.ಎನ್. ಗಿರೀಶ ಹಾಗೂ ಡಾ. ಹೆಚ್.ಎನ್. ಶಿವರರಣ, ಕೊಟ್ಟೂರು, ಕಮ್ಮರಚೇಡುನ ಜಾನಕುಂಟೆ ರಾಜಮ್ಮ ಜಾನಕುಂಟೆ ತಿಪ್ಪೇರುದ್ರಪ್ಪ ಹಾಗೂ ಕುಟುಂಬ, ಕೆ. ವಿಜಯಗಣೇಶ್ ಕುಮಾರ್ ಹಾಗೂ ಕುಟುಂಬ, ವಿದ್ಯಾಶ್ರೀ ಮತ್ತು ಶಿವಶಂಕರಗೌಡ, ಪೊಲೀಸ್ ಪಾಟೀಲ್ ಕುಟುಂಬದವರು ನೆರವೇರಿಸಿದರು.
ಯರನಾಳ ಹಿರೇಮಠ ಸಂಸ್ಥಾನದ ಶಿವಪ್ರಸಾದ ದೇವರು ಮಾತನಾಡಿ, ತಾಯಿಯೇ ದೇವರು. ಭೂಮಿಗಿಂತಲೂ ದೊಡ್ಡವರು ತಾಯಿ. ತಾಯಿಯ ಸೇವೆಯನ್ನು ಮಾಡುವುದು ಸಾಕ್ಷಾತ್ ದೇವರ ಸೇವೆಯನ್ನು ಮಾಡಿದಂತೆ. ಚಿಕೇನಕೊಪ್ಪದ ಚನ್ನವೀರ ಶರಣರು ಮಾತೆಯರನ್ನು ಗೌರವಿಸಲು ಉಡಿ ತುಂಬುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ. ಇಂದಿನ ದಿನಗಳಲ್ಲಿ ವಿದ್ಯೆ ಎಲ್ಲರಿಗೂ ಸಿಕ್ಕಿದ್ದು, ವಿನಯ ಮಾಯವಾಗಿದೆ. ವಿಜ್ಞಾನ ಅಭಿವೃದ್ಧಿ ಸಾಧಿಸಿದ್ದು ಅಜ್ಞಾನ ಪರಮಾವಧಿಯನ್ನು ತಲುಪಿದೆ. ಈ ನಿಟ್ಟಿನಲ್ಲಿ ಇಂದಿನ ಯುವಶಕ್ತಿಗೆ ವಿದ್ಯೆ, ವಿಜ್ಞಾನ, ವಿನಯ ಮತ್ತು ಪರಸ್ಪರರನ್ನು ಗೌರವಿಸುವ ಸಂಸ್ಕಾರವನ್ನು ಕಲಿಸಬೇಕಿದೆ ಎಂದರು.