ಪಾಲಕರು ಮಕ್ಕಳಿಗೆ ಸಂಸ್ಕಾರ ರೂಢಿಸಿ : ಅಡ್ನೂರ ಶ್ರೀಗಳು

0
Veerabhadreshwar Bhadrakali Murthy Prana Pratishtana program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪಾಲಕ-ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ, ನೈತಿಕ ಸಂಸ್ಕಾರ ನೀಡಬೇಕು. ಆಚಾರ-ವಿಚಾರ, ಸಂಸ್ಕಾರ-ಸಂಸ್ಕೃತಿಯಿಂದಾಗಿ ಮಕ್ಕಳು ಸುಸಂಸ್ಕೃತರಾಗಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುವದು ಎಂದು ಅಡ್ನೂರ ರಾಜೂರ-ಗದಗ ಬೃಹನ್ಮಠದ ಪೂಜ್ಯ ಷ.ಬ್ರ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಗದುಗಿನ ಬಸವೇಶ್ವರ ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶ್ರೀ ವೀರಭದ್ರೇಶ್ವರ ಶ್ರೀ ಭದ್ರಕಾಳಮ್ಮದೇವಿ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಿ ದಾನಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನೂತನ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರೆ ಅವುಗಳು ದೇವರು ಎಂದೆನಿಸಿಕೊಂಡು ಭಕ್ತರು ಪೂಜಿಸಿ ಆರಾಧಿಸುತ್ತಾರೆ. ಅದರಂತೆ ಹಿರಿಯರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ನೀಡಿದರೆ ಅವರು ಆದರ್ಶ ವ್ಯಕ್ತಿಗಳಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ವೀರಭದ್ರೇಶ್ವರ-ಭದ್ರಕಾಳಮ್ಮದೇವಿಯ ಹೊಸ ಮೂರ್ತಿಗಳು ಆಕರ್ಷಕ ಹಾಗೂ ಭಕ್ತಿಭಾವವನ್ನು ಸ್ಪುರಿಸುವಂತಿವೆ ಎಂದು ಬಣ್ಣಿಸಿದರು.
ಬಸವೇಶ್ವರ ನಗರದವರು ಪುರಾಣ, ಪ್ರವಚನ, ಧಾರ್ಮಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಪಡೆ, ಮಹಿಳಾ ಸಮಿತಿ ಕ್ರಿಯಾಶೀಲತೆಯಿಂದ ಕೆಲಸ ಮಾಡುತ್ತಿದ್ದು, ಬರಲಿರುವ ದಿನಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಟ್ರಸ್ಟಿ ರಾಚಪ್ಪ ಮಿಣಜಗಿ ಮಾತನಾಡಿ, ಎಲ್ಲ ಟ್ರಸ್ಟಿಗಳ, ಹಿರಿಯರ, ಯುವಕರ ಹಾಗೂ ಮಹಿಳಾ ಸಮಿತಿಯ ಸಹಕಾರದೊಂದಿಗೆ ದೇವಸ್ಥಾನದ ಎಲ್ಲ ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಗಳು ಸಾಂಗವಾಗಿ ಸಾಗಿಬಂದಿದ್ದು, ಸಹಕಾರ ನೀಡಿದವರು ಹಾಗೂ ದಾನಿಗಳು ಅಭಿನಂದನಾರ್ಹರು ಎಂದರು.
ವರದಾನೇಶ್ವರಿ ಮಹಿಳಾ ಮಂಡಳದ ಸದಸ್ಯರು ಪ್ರಾರ್ಥಿಸಿದರು. ಶಂಭು ಕಾರಕಟ್ಟಿ ಸ್ವಾಗತಿಸಿದರು. ಸುರೇಖಾ ಪಿಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯ ಚಂದ್ರು ತಡಸದ ಸಂದರ್ಭೋಚಿತವಾಗಿ ಮಾತನಾಡಿದರು.
ಮೂರ್ತಿ ಸ್ಥಾಪನೆಗಾಗಿ ಉದಾರ ದೇಣಿಗೆ ನೀಡಿದ ಎಲ್ಲ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಹಿರಿಯ ಟ್ರಸ್ಟಿಗಳಾದ ಶಿವಪುತ್ರಪ್ಪ ಬೇವಿನಮರದ, ಸುರೇಶ ಶಿರಿಗಣ್ಣವರ, ಪ್ರದೀಪ ಕೋಡೇಕಲ್ಲ, ಅರುಣ ಮುನವಳ್ಳಿ, ಮಹೇಶ ಗಡಾದ, ಶೈಲಾ ಕೋಡೇಕಲ್ಲ, ಯಂಡಿಗೇರಿ, ಮೂರ್ತಿ ಕಲಾವಿದ ರಾಘವೇಂದ್ರಆಚಾರ್ಯ ಶಿಲ್ಪಿ ಉಪಸ್ಥಿತರಿದ್ದರು. ಜ್ಯೋತಿ ಹೆರಲಗಿ ನಿರೂಪಿಸಿ ವಂದಿಸಿದರು.
ನಾಳೆ ಕಲ್ಯಾಣ ಮಹೋತ್ಸವ
ಆ.22ರಿಂದ 30ರವರೆಗೆ ಶ್ರೀ ವೀರಭದ್ರೇಶ್ವರ ಭದ್ರಕಾಳಿ ದೇವರ ಕಲ್ಯಾಣ ಮಹೋತ್ಸವ ಹಾಗೂ ಮಹಾರಥೋತ್ಸವ ಕಾರ್ಯಕ್ರಮಗಳು ಜರುಗುವವು. ಆ. 22ರಂದು ಮಧ್ಯಾಹ್ನ 12.45ಕ್ಕೆ ವೀರಭದ್ರೇಶ್ವರ ಭದ್ರಕಾಳಿ ಸಮೇತ ಕಲ್ಯಾಣ ಮಹೋತ್ಸವ, ಸಂಜೆ ಕಳಸಾರೋಹಣ, ಗ್ರಾಮದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೀಪಸ್ತಂಭಗಳಿಗೆ ದೀಪೋತ್ಸವವ ಜರುಗುವದು. 
Advertisement
ಆಧುನಿಕತೆಯ ಭರಾಟೆಯಲ್ಲಿ ಜನತೆ ಅದರಲ್ಲೂ ಯುವ ಜನಾಂಗ ಧರ್ಮ-ಆಧ್ಯಾತ್ಮದಿಂದ ವಿಮುಖರಾಗುತ್ತಿರುವುದು ಸರಿಯಾದ ಕ್ರಮ ಅಲ್ಲ. ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ಆಚಾರ ವಿಚಾರ, ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು. ಅಂದಾಗ ಮನಸ್ಸು ಶಾಚಿತ, ಪ್ರಸನ್ನ ಚಿತ್ತವಾಗಿರುತ್ತದೆ. ಚಂಚಲ ಮನಸ್ಸು ದೂರವಾಗಿ ಸಾಧನೆಯ ಮಾರ್ಗದೆಡೆಗೆ ಸಾಗಲು ಸಾಧ್ಯವಾಗುತ್ತದೆ.
– ಷ.ಬ್ರ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು.

Spread the love

LEAVE A REPLY

Please enter your comment!
Please enter your name here