ವೀರೇಶ್ವರ ಪುಣ್ಯಾಶ್ರಮ ಕಲೆಗಳನ್ನು ಪೋಷಿಸುತ್ತಿದೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮುಂಡರಗಿಯ ಶ್ರೀಮಠಕ್ಕೂ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮುಂಡರಗಿಯ ನಾಡೋಜ ಜ. ಪೂಜ್ಯಶ್ರೀ ಡಾ. ಅನ್ನದಾನೀಶ್ವರ ಶಿವಯೋಗಿಗಳವರು ಹೇಳಿದರು.

Advertisement

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ.ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.

ಈ ಹಿಂದೆ ವೀರೇಶ್ವರ ಪುಣ್ಯಾಶ್ರಮವು ಆರ್ಥಿಕವಾಗಿ ಮತ್ತು ನಾಟಕ ಕಂಪನಿ ಮುಚ್ಚುವ ಹಂತಕ್ಕೆ ಬಂದಾಗ ಪೂಜ್ಯಶ್ರೀ ಪುಟ್ಟರಾಜ ಕವಿ ಗವಾಯಿಗಳವರಿಗೆ 300 ರೂ.ಗಳನ್ನು ನೀಡಿ, ಯಾವುದೇ ಕಾರಣಕ್ಕೂ ಎಷ್ಟೇ ಕಷ್ಟ ಬಂದರೂ ನಾಟಕ ಕಂಪನಿ ಮುಚ್ಚಬಾರದು ಎಂದು ಹೇಳಿದ್ದರಿಂದ ಅಂದು ಹೇಮರೆಡ್ಡಿ ಮಲ್ಲಮ್ಮ ನಾಟಕ ಒಂದು ವರ್ಷಗಳವರೆಗೆ ನಿರಂತರವಾಗಿ ಪ್ರದರ್ಶನಗೊಂಡು ಆರ್ಥಿಕ ಸಂಕಷ್ಟನ್ನು ದೂರ ಮಾಡಿತು. ಬಸರಿಗಿಡದ ವೀರಪ್ಪನವರು ತಮ್ಮ ಸಂಪತ್ತನ್ನು ದಾನ ಮಾಡಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆಗೆ ಕಾರಣವಾಗಿ ಧರ್ಮಾತ್ಮರಾಗಿದ್ದರೆ. ಉಭಯ ಗುರುಗಳ ಮಾರ್ಗದರ್ಶನಂತೆ ಕಲೆ, ಸಾಹಿತ್ಯ, ಸಂಗೀತವನ್ನು ಉಳಿಸಿ, ಬೆಳೆಸುತ್ತ ಇಂದಿನ ಪೂಜ್ಯರಾದ ಡಾ. ಕಲ್ಲಯ್ಯಜ್ಜನವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಹಾಗೂ ಅಸುಂಡಿ ಅಧ್ಯಾತ್ಮ ವಿದ್ಯಾಶ್ರಮದ ಪೂಜ್ಯಶ್ರೀ ಶಿವಶರಣೆ ಡಾ. ನೀಲಮ್ಮ ತಾಯಿಯವರು ಮಾತನಾಡಿದರು.

ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಜ. ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಅಡ್ನೂರ-ರಾಜೂರು ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ಕನಕಗಿರಿ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಪೂಜ್ಯಶ್ರೀ ಡಾ. ಚನ್ನಮಲ್ಲ ಮಹಾಸ್ವಾಮಿಗಳು, ಕಪೋತಗಿರಿ ನಂದಿವೇರಿ ಸಂಸ್ಥಾನಮಠದ ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು, ಹೂವಿನಹಡಗಲಿಯ ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು, ಹಿರೇಮಲ್ಲನಕೇರಿಯ ಪೂಜ್ಯಶ್ರೀ ಚನ್ನಬಸವ ಮಹಾಸ್ವಾಮಿಗಳು, ಎಚ್.ಎಸ್. ವೆಂಕಟಾಪೂರದ ಪೂಜ್ಯಶ್ರೀ ಗುರುಸಿದ್ದೇಶ್ವರ ಶಿವಾಚಾರ್ಯರು, ಹೊಳಲಿನ ಚೆನ್ನಬಸವ ದೇವರು ಸಮ್ಮುಖ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾತನಗೌಡ ಪಾಟೀಲ, ಪೀರಸಾಬ ಕೌತಾಳ, ಪ್ರಕಾಶ ಬಸರಿಗಿಡದ, ಮಹಾಂತೇಶ ಕೆ, ಶೇಖಣ್ಣ ಗದ್ದಿಕೇರಿ, ಚನ್ನಬಸಯ್ಯ ಬಂಕಾಪುರಮಠ, ಶಿವಮೊಗ್ಗದ ಎಸ್.ಗುರುಪಂಚಾಕ್ಷರಿ ಮುಂತಾದವರು ಉಪಸ್ಥಿತರಿದ್ದರು. ಶಿವಮೊಗ್ಗದ ಶಾಖಾ ಆಶ್ರಮದ ಅಂಧ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಜರುಗಿತು. ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಭಾರ ಮನ್ನಣೆಗೈದರು. ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಸಿದ್ದಾಪೂರ ಸ್ವಾಗತಿಸಿದರು. ಶಡಗರವಳ್ಳಿಯ ಶಂಕ್ರಯ್ಯಶಾಸ್ತ್ರಿ ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು.

ನಂತರ ಅಹೋರಾತ್ರಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಂಗೀತ ಕಲಾವಿದರಿಂದ ಸ್ವರ ಸಮಾರಾಧನೆ ಸಂಗೀತ ಸಮಾರಾಧನೆ ಕಾರ್ಯಕ್ರಮ ಜರುಗಿತು.

ಸೋಲಾಪುರದ ಬಸವಲಿಂಗೇಶ್ವರ ತುಪ್ಪಿನ ವಿರಕ್ತಮಠದ ಪೂಜ್ಯಶ್ರೀ ಡಾ. ಅಭಿನವ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ವೀರೇಶ್ವರ ಪುಣ್ಯಾಶ್ರಮದ ಉಭಯ ಗುರುಗಳು ಸರಳ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದ್ದಾರೆ. ವಸಂತ ಬಂದರೆ ಪ್ರಕೃತಿಯಲ್ಲಿ ಬದಲಾವಣೆಯಾಗುವಂತೆ, ಸಂತರುಗಳು ಸಮಾಜದಲ್ಲಿ ಬಂದರೆ ಬದಲಾವಣೆ ಆಗುತ್ತದೆ. ಅಂಥಹ ಸಂತರು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಬಂದು ನೆಲೆಸಿದ್ದಾರೆ. ಅವರುಗಳು ಈ ನಾಡಿಗೆ ಸೂರ್ಯ-ಚಂದ್ರರು ಇದ್ದ ಹಾಗೆ. ತಂದೆ-ತಾಯಿ ನಮ್ಮನ್ನು ಜಗತ್ತಿಗೆ ತಂದರೆ, ಈ ಜಗತ್ತಿನಿಂದ ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಗುರುಗಳಿಂದ ಮಾತ್ರ ಸಾಧ್ಯವಾಗುತ್ತದೆ. ಅಂತಹ ಗುರುಗಳು ಉಭಯ ಶ್ರೀಗಳಾಗಿದ್ದಾರೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here