ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿಗೆ ಜ್ಞಾನ ನೀಡುವ ಕ್ಷೇತ್ರ ಕಾಶಿಯಾದರೆ, ಸಂಗೀತ ನೀಡುವ ಕಾಶಿ ಗದುಗಿನ ವೀರೇಶ್ವರ ಪುಣ್ಯಾಶ್ರಮವಾಗಿದೆ ಎಂದು ಕಾಶಿ ಪೀಠದ ಪೂಜ್ಯಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ ಹಾಗೂ ಕೀರ್ತನ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಇದು ಕೇವಲ ಪುಣ್ಯಾಶ್ರಮವಲ್ಲ, ಸಂಗೀತ ಕಾಶಿಯಾಗಿದೆ. ಮಗು ಆರೋಗ್ಯವಾಗಿದ್ದರೆ ಮನೆಯಲ್ಲಿ ಸಾಕುತ್ತಾರೆ. ಮಗು ವಿಕಲಚೇತನರಾದರೆ ತ್ಯಾಗ ಮಾಡುತ್ತಾರೆ. ಅಂತಹ ತ್ಯಕ್ತ ಮಕ್ಕಳನ್ನು ಗುರುತಿಸಿ ಅವರುಗಳನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟವರು ದೇವಯೋಗಿ ಪೂಜ್ಯಶ್ರೀ ಹಾನಗಲ್ ಕುಮಾರಸ್ವಾಮಿಗಳು ಎಂದು ಕಾಶಿ ಶ್ರೀಗಳು ಹೇಳಿದರು.
ಹುಬ್ಬಳ್ಳಿಯ ಆಯುರ್ವೇದಿಕ್ ಮಹಾಮನೆಯ ವೈದ್ಯಶ್ರೀ ಚೆನ್ನಬಸವಣ್ಣ ಗುರೂಜಿ ಮಾತನಾಡಿ, ಹಿಂದಿನ ದಿನಗಳಲ್ಲಿ ಮಕ್ಕಳು ಕಲ್ಲು, ಕಟ್ಟಿಗೆ, ಮಣ್ಣಿನಲ್ಲಿ ಆಟವಾಡುತ್ತಿದ್ದರೆ, ಇಂದಿನ ಮಕ್ಕಳು ಮೊಬೈಲ್, ಟಿವಿಯಲ್ಲಿ ಮುಳುಗಿಹೋಗಿದ್ದಾರೆ. ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಸೂಡಿ ಜುಕ್ತಿಹಿರೇಮಠದ ಪೂಜ್ಯಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಎಮ್ಮಿಗನೂರ ಶ್ರೀ ಹಂಪಿ ಸಾವಿರ ದೇವರು ಮಹಾಮಹಂತರ ಸಂಸ್ಥಾನ ಗುರುಮಠದ ಪೂಜ್ಯಶ್ರೀ ವಾಮದೇವ ಮಹಾಂತ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹೆಬ್ಬಾಳ ಸಂಸ್ಥಾನ ಬೃಹನ್ಮಠದ ಪೂಜ್ಯಶ್ರೀ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸುಳ್ಳ-ಹೂಲಿ ಪಂಚಗೃಹಮಠದ ಪೂಜ್ಯಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಡ್ನೂರ-ರಾಜೂರ ಬ್ರಹನ್ಮಠದ ಪೂಜ್ಯಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು, ನೆಗಳೂರು ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಲಿಂಗಸೂರ ಮಾಣಿಕೇಶ್ವರಿ ಆಶ್ರಮದ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು, ಗದುಗಿನ ಅಡವಿಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ, ಬಸವನ ಬಾಗೇವಾಡಿಯ ಪೂಜ್ಯಶ್ರೀ ಶಿವಪ್ರಕಾಶ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ವೀರೇಶ್ವರ ಪುಣ್ಯಾಶ್ರಮದ ಪೀಠಾಧೀಪತಿ ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು.
ಈ ಸಂದರ್ಭದಲ್ಲಿ ಪಂ. ರಾಜಗುರು ಕಲಕೇರಿ, ನಿಂಗಪ್ಪ ಕೆಂಗಾರ, ಡಾ. ಬಸವರಾಜ ಬೊಮ್ಮನಹಳ್ಳಿ, ವಸಂತಗೌಡ್ರ ಪೊಲೀಸ್ಪಾಟೀಲ, ಲಿಂಗರಾಜ ಗುಡಿಮನಿ, ಅನಿಲ್ ಅಬ್ಬಿಗೇರಿ, ಪ್ರಶಾಂತ ಶಾಬಾದಿಮಠ, ಮಹೇಶ ಶಾಬಾದಿಮಠ, ವಿಜಯಕುಮಾರ ಹಿರೇಮಠ, ರುದ್ರಯ್ಯಸ್ವಾಮಿ ಹಿರೇಮಠ, ಶಿರಗುಪ್ಪದ ಜಂಬನಗೌಡ್ರ, ವಿ.ಎಸ್. ಮಾಳೆಕೊಪ್ಪಮಠ, ಪಿ.ಸಿ. ಹಿರೇಮಠ, ಡಾ. ಸಿದ್ರಾಮಯ್ಯ ನಿಂಗಯ್ಯಮಠ, ಎಂ.ಆರ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ `ಗೀತ ಮಂದಾರ’ ಗ್ರಂಥ ಹಾಗೂ `ಪುಟ್ಟರಾಜ ಋಣಬಾರ’ ಧ್ವನಿಸುರಳಿ ಬಿಡುಗಡೆಯಾದವು. ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಕೂಗು ಸ್ವಾಗತಿಸಿದರು. ಬಂಡಯ್ಯಶಾಸ್ತ್ರಿ ಸುಂಟನೂರ ಕಾರ್ಯಕ್ರಮ ನಿರೂಪಿಸಿದರು.
ಚಳಗೇರಿ ಹಿರೇಮಠದ ಪೂಜ್ಯಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಉಭಯ ಶ್ರೀಗಳ ಜಯಂತಿಯನ್ನು ಸರಕಾರದಿಂದಲೇ ಆಚರಿಸುವಂತಾಗಬೇಕು. ಉತ್ತರ ಕರ್ನಾಟಕದಲ್ಲಿ ಉಭಯ ಶ್ರೀಗಳು ಅಭೂತಪೂರ್ವ ಸೇವೆಯನ್ನು ಸಲ್ಲಿಸಿ ತಮ್ಮ ಜೀವನವನ್ನು ಸಾರ್ಥಕಪಡಿಸಿಕೊಂಡಿದ್ದಾರೆ ಎಂದು ಹೇಳಿದರು.