ಮಂಡ್ಯ: ನಾಗಮಂಗಲದಿಂದ ಮೈಸೂರಿನ ಕಸಾಯಿಖಾನೆಗೆ 34 ಎಳೆ ಕರುಗಳನ್ನು ಸಾಗಿಸುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ 8 ಎಳೆ ಕರುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಾಗಮಂಗಲ ತಾಲೂಕಿನ ಬಸರಾಳು ನಾಗಮಂಗಲ ರಸ್ತೆಯ ಎಗ್ಗಟ್ಟಿ ಗೇಟ್ ಬಳಿ ನಡೆದಿದೆ.
ಸ್ಕಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಹೆಚ್ಚಿನ ಸಂಖ್ಯೆಯ ಎಳೆ ಕರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಾಹನ ಪಲ್ಟಿಯಾದ ಪರಿಣಾಮ 34 ಕರುಗಳ ಪೈಕಿ 8 ಕರುಗಳು ಸಾವನ್ನಪ್ಪಿದ್ದು, ಹಲವು ಕರುಗಳಿಗೆ ಗಾಯಗಳಾಗಿವೆ.
ಮೃತ ಕರುಗಳ ದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆ ಸಂಭವಿಸಿದ ತಕ್ಷಣ ಚಾಲಕ ವಾಹನವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.



