ಬೀದರ್:- ಸರ್ಕಾರಿ ಕಚೇರಿಯಲ್ಲೇ ಆಸ್ತಿ ನೋಂದಣಿಗಾಗಿ ಲಂಚ ಪಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ತಮ್ಮ ಮೇಲಿನ ಆರೋಪಕ್ಕೆ ಕಮಲನಗರ ಪಿಡಿಓ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹಣ ಪಡೆದಿದ್ದು ನಿಜ, ಆದರೆ ಅದು ಟ್ಯಾಕ್ಸ್ ಮತ್ತು ಅಭಿವೃದ್ಧಿ ಹಣ. 2024ರ ಅಕ್ಟೋಬರ್ 21ರಂದು ಫಲಾನುಭವಿ ಆಸ್ತಿ ಟ್ಯಾಕ್ಸ್ ಕಟ್ಟಿದ್ದಾರೆ. ಆದರೆ ಇದು ಲಂಚ ಎಂದು ಕೆಲವು ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅದು ಪ್ಲಾಟ್ ಆಸ್ತಿ ನೋಂದಣಿಯ ಟ್ಯಾಕ್ಸ್ ಹಣವಾಗಿದೆ. ಸಿಇಓಗೆ ದೂರು ನೀಡಿದವರು 8 ತಿಂಗಳ ಹಿಂದೆಯೇ ಈ ವೀಡಿಯೋ ಮಾಡಿದ್ದು, ಈಗ ವೈರಲ್ ಮಾಡಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ತಿಳಿಸಿದರು.
ಏನಿದು ಪ್ರಕರಣ?
ಪಿಡಿಓ ರಾಜಕುಮಾರ್ ಅವರು ಬೀದರ್ ಜಿಲ್ಲೆಯ ಕಮಲನಗರ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಹಣ ಪಡೆದು ಎಣಿಸಿಕೊಳ್ಳುತ್ತಿರುವ ವೀಡಿಯೋ ವೈರಲ್ ಆಗಿತ್ತು. ಇದು ಲಂಚದ ಹಣ ಎಂಬ ದೂರು ಕೂಡ ನೀಡಲಾಗಿತ್ತು. ಈ ಬೆನ್ನಲ್ಲೇ ಇದೀಗ ಪಿಡಿಓ ಸ್ಪಷ್ಟನೆ ಕೊಟ್ಟಿದ್ದಾರೆ.