ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಶುಕ್ರವಾರ ರೋಣ ತಾಲೂಕಿನ ಜಿಗಳೂರು ಕೆರೆಯ ವೀಕ್ಷಣೆ ನಡೆಸಿದರು. ಜಿಗಳೂರು ಕೆರೆಯ ನೀರು ರೋಣ, ಗಜೇಂದ್ರಗಡ ಹಾಗೂ ನರೇಗಲ್ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಸರಬರಾಜಾಗುತ್ತಿದ್ದು, ಕೆರೆಯ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಸೂಚಿಸಿದರು.
ಕೆರೆಯ ನೀರು ಪೂರೈಕೆಗೆ ಅಳವಡಿಸಲಾಗಿರುವ ಪಂಪ್ಸೆಟ್ಗಳನ್ನು ವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಗಳು, ಕೆರೆಯ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಕೆರೆಯ ನೀರು ಸಾರ್ವಜನಿಕರಿಗೆ ಸಮರ್ಪಕವಾಗಿ ಸದ್ಭಳಕೆಯಾಗುವಂತೆ ಕ್ರಮ ವಹಿಸಬೇಕೆಂದು ಸಂಬಂಧಿತ ಇಲಾಖೆಯ ಇಂಜಿನಿಯರ್ಗಳಿಗೆ ತಿಳಿಸಿದರು.
ಕೆರೆ ಪ್ರದೇಶದಲ್ಲಿ ಜನ-ಜಾನುವಾರುಗಳು ಓಡಾಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕೆರೆಯ ನೀರು ಪೋಲಾಗದಂತೆ ನಿಗಾ ವಹಿಸುವುದರೊಂದಿಗೆ ನೀರು ಮಲಿನವಾಗದಂತೆ ಜಾಗೃತೆ ವಹಿಸಬೇಕು. ಕೆರೆಯ ನೀರು ಈ ಭಾಗದ ಜನ-ಜಾನುವಾರುಗಳ ನೀರಿನ ದಾಹ ನೀಗಿಸುವಂತಾಗಲು ಕೆರೆ ನಿರ್ವಹಣಾ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವರಾಜ ಕೊಟ್ಟೂರ, ರೋಣ, ಗಜೇಂದ್ರಗಡ, ನರೇಗಲ್ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಇದ್ದರು.