ಬೆಂಗಳೂರು: ಬೆದರಿಕೆ ಕೇಸ್ನಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಮಾಜಿ ಎಂಎಲ್ಸಿ ರಮೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ದೂರುದಾರ ವಿಜಯ್ ಟಾಟಾ, ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ಅಷ್ಟೇ ನೀಡಿದ್ದಾರೆ ಹೊರತು ಯಾವುದೇ ಪ್ರಾಥಮಿಕ ದಾಖಲಾತಿ ನೀಡಿಲ್ಲ. ಹೀಗಾಗಿ ಸದ್ಯ ಹೆಚ್ಡಿ ಕುಮಾರಸ್ವಾಮಿಗೆ ಯಾವುದೇ ತನಿಖೆ ತಲೆಬಿಸಿ ಇಲ್ಲ.
ಪ್ರಾಥಮಿಕ ದಾಖಲಾತಿ ಸಿಗದೆ ಮುಂದಿನ ತನಿಖೆ ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ದಾಖಲಾತಿಗಳನ್ನು ನೀಡುವಂತೆ ಉದ್ಯಮಿ ವಿಜಯ್ ಟಾಟಾಗೆ ಪೊಲೀಸರು ಸೂಚಿಸಿದ್ದಾರೆ.
50 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದಾರೆಂದು ಇತ್ತೀಚೆಗೆ ವಿಜಯ್ ಟಾಟಾ ಆರೋಪ ಮಾಡಿದ್ದರು. ಅವರ ದೂರಿನ ಅನ್ವಯ ಮಾಜಿ ಎಂಎಲ್ಸಿ ರಮೇಶ್ ಗೌಡ ಹಾಗೂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇನ್ನು ರಮೇಶ್ ಗೌಡ ಕೂಡ 5 ಕೋಟಿ ರೂ. ಡಿಮ್ಯಾಂಡ್ ಮಾಡಿ ಬೆದರಿಸಿದ್ದಾರೆ ಅಂತ ಕೂಡ ದೂರು ನೀಡಲಾಗಿತ್ತು. ರಮೇಶ್ ಗೌಡ ವಾಟ್ಸಪ್ ಚಾಟ್ ಕೂಡ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ವಾಟ್ಸಪ್ ಚಾಟ್ ಹಾಗೂ ಫೋನ್ ಕರೆ ಬಗ್ಗೆ ದೂರುದಾರ ವಿಜಯ್ ಟಾಟಾ ಯಾವುದೇ ದಾಖಲಾತಿ ನೀಡಿಲ್ಲ. ಪೊಲೀಸರ ಮುಂದೆ ಹಾಜರಾದ ವೇಳೆ ಪ್ರಾಥಮಿಕ ದಾಖಲೆ ಒದಗಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಕೋಟ್ಯಾಂತರ ರೂಪಾಯಿ ಖರ್ಚಿನ ಬಗ್ಗೆ ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿಖಿಲ್ ಕುಮಾರಸ್ವಾಮಿ ಪರ ಸೋಶಿಯಲ್ ಮೀಡಿಯಾ ಪ್ರಚಾರ ಮಾಡಲಾಗಿತ್ತು. ಪ್ರಚಾರಕ್ಕೆ ತಮ್ಮ ಕೈಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.