ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಚರ್ಚೆಯ ನಡುವೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಸಹೋದರ ದಿನಕರ್ ತೂಗುದೀಪ ಜೊತೆಗೂಡಿ ಜೈಲಿಗೆ ತೆರಳಿದ ಅವರು, ದರ್ಶನ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.
ಡಿಸೆಂಬರ್ 23ರಂದು ಮಧ್ಯಾಹ್ನ 3.50ರ ಸುಮಾರಿಗೆ ಜೈಲಿಗೆ ತೆರಳಿದ ವಿಜಯಲಕ್ಷ್ಮಿ ಮತ್ತು ದಿನಕರ್ ಅವರು, ಸುಮಾರು ಅರ್ಧ ಗಂಟೆ ದರ್ಶನ್ ಜೊತೆ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಬಳಿಕ ಶುರುವಾದ ಫ್ಯಾನ್ಸ್ ವಾರ್ ಸೇರಿದಂತೆ ಸದ್ಯದ ಹೊರಗಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ‘ದಿ ಡೆವಿಲ್’ ಸಿನಿಮಾದ ಬಗ್ಗೆ ದರ್ಶನ್ ಅವರು ಮಾಹಿತಿ ಕೇಳಿದ್ದು, ಸಿನಿಮಾ ಕಲೆಕ್ಷನ್ ಹಾಗೂ ಅಭಿಮಾನಿಗಳ ಬೆಂಬಲದ ಕುರಿತು ವಿಜಯಲಕ್ಷ್ಮಿ ಮತ್ತು ದಿನಕರ್ ತೂಗುದೀಪ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಫ್ಯಾನ್ಸ್ ವಾರ್ ಬಗ್ಗೆ ಹೆಚ್ಚು ತಲೆ ಕೆಸಿಕೊಳ್ಳಬೇಡಿ ಎಂದು ದರ್ಶನ್ ಅವರು ಶಾಂತವಾಗಿ ಹೇಳಿದ್ದಾರೆ ಎನ್ನಲಾಗಿದೆ.
ಪತಿ ಭೇಟಿ ಮಾಡಿ ಹೊರಬಂದ ಕೆಲವೇ ಹೊತ್ತಿನಲ್ಲಿ ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿ ಭೇಟಿ ಬಳಿಕ ಮನಸ್ಸಿನ ದುಗುಡ ದೂರವಾಗಿ ಸಂತೋಷವಾಗಿರುವ ಭಾವದಲ್ಲಿ ಪೋಸ್ಟ್ ಮಾಡಿರುವುದು ಗಮನ ಸೆಳೆದಿದೆ. ಡಿಸೆಂಬರ್ 25ರಂದು ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಬಿಡುಗಡೆಯಾಗಲಿದ್ದು, ಫ್ಯಾನ್ಸ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕೌತುಕಕ್ಕೆ ಕಾರಣವಾಗಿದೆ.



