ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕದಲ್ಲಿ ಇಸ್ಲಾಂ ವಾಸ್ತುಕಲೆಯ ಅಧ್ಯಯನಕ್ಕೆ ಪ್ರಮುಖವಾಗಿರುವ ಕೆಲವು ಸ್ಥಳಗಳಲ್ಲಿ ವಿಜಯಪುರ ಒಂದಾಗಿದ್ದು, ಇದು ಬಿಜ್ಜನಹಳ್ಳಿ, ವಿಜಾಪುರ, ಬಿಜಾಪುರ ಎಂದೆಲ್ಲ ಕರೆಯಲ್ಪಟ್ಟಿದೆ. ಬಾದಾಮಿ ಚಾಲುಕ್ಯರು, ಮಳಖೇಡದ ರಾಷ್ಟçಕೂಟರು, ಕಲ್ಯಾಣದ ಚಾಳುಕ್ಯರು ಮತ್ತು ಕಲಚೂರಿಗಳು, ದೆಹಲಿ ಖಿಲ್ಜಿಗಳು, ಬಹಮನಿ ಸುಲ್ತಾನರು, ಆದಿಲ್ಶಾಹಿಗಳು, ಮುಘಲರು, ಹೈದರಾಬಾದ ನಿಜಾಮರು, ಪೇಶ್ವೆಗಳು, ಬ್ರಿಟಿಷರ ಆಡಳಿತಕ್ಕೆ ಒಳಪಡುತ್ತ ಬಂದಿದ್ದು, ಹಲವು ವರ್ಷಗಳು ಆದಿಲ್ಶಾಹಿಗಳ ರಾಜಧಾನಿಯಾಗಿತ್ತು ಎಂದು ಪ್ರೊ. ಬಸವಂತೆಪ್ಪ ದೊಡ್ಡಮನಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಡಾ. ಅಪ್ಪಣ್ಣ ಹಂಜೆ ಅವರ ಮಾರ್ಗದರ್ಶನದಂತೆ ‘ವಿಜಯಪುರದ ಇತಿಹಾಸ ಮತ್ತು ಸ್ಮಾರಕಗಳು’ ಕುರಿತು ಅಧ್ಯಯನಕ್ಕೆ ವಿಜಯಪುರದಲ್ಲಿ ಕ್ಷೇತ್ರಕಾರ್ಯ ಕೈಗೊಂಡು ವಿದ್ಯಾರ್ಥಿಗಳಿಗೆ ಅಲ್ಲಿಯ ಸ್ಮಾರಕಗಳ ನಿಮಾರ್ತೃ, ಕಾಲಮಾನ, ವಿಶೇಷತೆಯನ್ನು ಪರಿಚಯಿಸಿದರು.
ಇಸ್ಲಾಂ ಸ್ಮಾರಕಗಳು ಇಂಡೋ-ಇಸ್ಲಾಮಿಕ್ ವಾಸ್ತುಕಲೆಯ ಪರಿಕಲ್ಪನೆ, ಲಕ್ಷಣಗಳು, ವೈಶಿಷ್ಟ್ಯತೆಗೆ ಅತ್ಯುತ್ತಮ ನಿದರ್ಶನಗಳಾಗಿವೆ. ಶಿವಗಿರಿಯಲ್ಲಿ ಪ್ರತಿಷ್ಠಾಪಿತ 85 ಅಡಿ ಎತ್ತರದ ಶಿವನ ಶಿಲ್ಪವು ದೇಶದ ೨ನೇ ಅತಿದೊಡ್ಡ ಶಿವನ ಶಿಲ್ಪವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಿಲ್ಲಾದಲ್ಲಿರುವ ಸಹಸ್ರಫಣಿ ಪಾರ್ಶ್ವನಾಥ ಬಸದಿಯಲ್ಲಿ ಪ್ರತಿಷ್ಠಾಪಿತ ಪಾರ್ಶ್ವನಾಥನ ಶಿಲ್ಪವು ವಿಶಿಷ್ಟವಾಗಿದ್ದು, ಈತನ ಶಿರದ ಮೇಲಿರುವ 1008 ಹಡೆಗಳ ಸರ್ಪವು ಆಕರ್ಷಕವಾಗಿದೆ. ಒಟ್ಟಾರೆ ವಿಜಯಪುರವು ಇಸ್ಲಾಂ ವಾಸ್ತುಕಲೆ ಅಧ್ಯಯನಾಸಕ್ತರಿಗೆ ಪ್ರಯೋಗಶಾಲೆಯಂತಿದೆ ಎಂದು ಪ್ರೊ. ದೊಡ್ಡಮನಿ ಹೇಳಿದರು.