ವಿಜಯಸಾಕ್ಷಿ ಸುದ್ದಿ, ಗದಗ:

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗೀಯ ಕಚೇರಿ ಮೇಲೆ (ಎನ್ ಡಬ್ಲ್ಯೂಕೆಎಸ್ ಆರ್ ಟಿಸಿ) ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ಗುರುವಾರ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಗದಗ ಸಾರಿಗೆ ಸಂಸ್ಥೆ ಕಚೇರಿಯ ಲೆಕ್ಕ ಅಧೀಕ್ಷಕ ಜಗದೀಶ್ ಹಲವಾಗಲಿ ಹಾಗೂ ಕಚೇರಿ ಸಹಾಯಕ ಈರಣ್ಣ ಎಲಿಬಳ್ಳಿ ಅವರ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ವಿಚಾರಣೆ ನಡೆಸಿದರು.
ಘಟನೆಯ ವಿವರ
ಗದಗ ಮೂಲದ ವಿನಾಯಕ ಹರವಿ ಅವರ ಸಹೋದರ ನಾಗರಾಜ ಹರವಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಾಗರಾಜ ನಿಧನರಾಗಿದ್ದರು. ಸರ್ಕಾರದಿಂದ ಬರಬೇಕಿದ್ದ ಬಾಕಿ ಹಣವನ್ನು ಎರಡು ಕಂತ್ನಲ್ಲಿ ಬಿಡುಗಡೆ ಮಾಡಿದ್ದರು. ಸದ್ಯ 94,200 ರೂ. ಬಿಡುಗಡೆಯಾಗಿದ್ದು, ಈ ಗ್ರ್ಯಾಚುಟಿ ಹಣ ಬಿಡುಗಡೆಗೆ ಜಗದೀಶ ಹಲವಾಗಲಿ ಹಾಗೂ ಈರಣ್ಣ ಎಲಿಬಳ್ಳಿ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ವಿನಾಯಕ ಹರವಿ ಎಸಿಬಿಗೆ ದೂರು ನೀಡಿದ್ದರು. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬೇಡಿಕೆಯಿಟ್ಟಿದ್ದ ಲಂಚದ ಹಣವನ್ನು ಹುಡ್ಕೊ ಕಾಲನಿಯ ನಿವಾಸಿ ಅನಿಲ್ ಹರ್ತಿ ಅವರ ಬಳಿ ಕೊಡುವಂತೆ ಸೂಚಿಸಿದ್ದರು. ಅಲ್ಲದೆ, ಹಣ ಮುಟ್ಟಿದ ತಕ್ಷಣ ಬಂದು ಚೆಕ್ ತೆಗೆದುಕೊಂಡು ಹೋಗುವಂತೆ ಈರಣ್ಣ ಎಲೆಬಳ್ಳಿ ವಿನಾಯಕ ಅವರಿಗೆ ಹೇಳಿದ್ದರು. ಅದರಂತೆ, ವಿನಾಯಕ ಹರವಿ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ ಹಣದ ಪೈಕಿ ಶುಕ್ರವಾರ ಮುಳಗುಂದ ರಸ್ತೆಯ ನಿಸರ್ಗದ ಬಳಿ ಏಜೆಂಟ (ಮಧ್ಯವರ್ತಿ) ಅನಿಲ್ ಗೆ 7 ಸಾವಿರ ರೂ. ನೀಡುತ್ತಿದ್ದಾಗ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಈ ವೇಳೆ ವಿನಾಯಕ ಹರವಿ ಎಂಬುವವರ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಎಸ್ ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ, ಡಿಎಸ್ಪಿ ಎಂ.ವಿ.ಮಲ್ಲಾಪುರ ನೇತೃತ್ವದಲ್ಲಿ ಸಿಪಿಐಗಳಾದ ಆರ್.ಎಫ್.ದೇಸಾಯಿ, ವಿ.ಎಂ.ಹಳ್ಳಿ, ಸಿಬ್ಬಂದಿಗಳಾದ ಎಂ.ಎಂ.ಅಯ್ಯನಗೌಡರ್, ವಿಶ್ವನಾಥ್, ವಿರೇಶ್ ಜೋಳದ, ಎನ್.ಎಸ್.ತಾಯಣ್ಣವರ, ಮಂಜು ಮುಳಗುಂದ, ಶರೀಫ್ ಮುಲ್ಲಾ, ನಾರಾಯಣ ರೆಡ್ಡಿ ಈ ಕಾರ್ಯಚರಣೆಯಲ್ಲಿದ್ದರು.