ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಎಪಿಎಂಸಿಯಲ್ಲಿ ಗೋವಿನ ಜೋಳ ವಿಕ್ರಿ ಮಾಡಿ, ಅದರ ಹಣ ಪಡೆದು ತನ್ನೂರಿಗೆ ಹೊರಡಲು ಬಸ್ ಏರಿದ ರೈತರೊಬ್ಬರ ಬನಿಯನ್ನ ಕಿಸೆಯನ್ನು ಕತ್ತರಿಸಿದ ಯಾರೋ ಕಳ್ಳರು 50 ಸಾವಿರ ರೂ. ಹಣವನ್ನು ಕಳ್ಳತನ ಮಾಡಿರುವ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಿರ್ಯಾದಿದಾರರಾದ ಕಲಕೇರಿಯ ತಿಮ್ಮಪ್ಪ ನಿಂಗಪ್ಪ ಬರದೂರ ಹಣ ಕಳೆದುಕೊಂಡವರಾಗಿದ್ದಾರೆ.
ಇವರು ಜೂನ್ 5ರಂದು ಬೆಳಿಗ್ಗೆ ತಮ್ಮ ಊರಿನಿಂದ ಮುಂಡರಗಿಯ ಎಪಿಎಂಸಿಗೆ ತೆರಳಿದ್ದರು. ಅಲ್ಲಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ಟ್ರೇಡಿಂಗ್ ಕಂಪನಿಯಲ್ಲಿ ಈ ಒಳಗಾಗಿ ಇರುವ ಗೋವಿನ ಜೋಳದ ಪಟ್ಟಿಯಾದ 50 ಸಾವಿರ ರೂ ಪಡೆದುಕೊಂಡಿದ್ದರು.
ನಂತರ ವಾಪಸ್ ಊರಿಗೆ ಹೋಗುವ ಉದ್ದೇಶದಿಂದ ಮುಂಡರಗಿ ಬಸ್ ನಿಲ್ದಾಣಕ್ಕೆ ಬಂದು, ಮಧ್ಯಾಹ್ನ 2.30ರ ಸುಮಾರಿಗೆ ತಮ್ಮೂರಿನ ಬಸ್ ಹಿಡಿದು ಕುಳಿತಿದ್ದರು.
ಜೊತೆಯಾಗಿ ಬಂದಿದ್ದ ಅವರದೇ ಊರಿನ ನಿಂಗರಡ್ಡೆಪ್ಪ ಮೇಟಿ ಮತ್ತು ಗುಡದೀರಪ್ಪ ಬಳಿಗೇರ ಇವರೊಂದಿಗೆ ಬಸ್ನಲ್ಲಿ ಕುಳಿತಿದ್ದಾಗ, ಕಿಸೆಯಲ್ಲಿದ್ದ ಹಣವನ್ನು ನೋಡಿದಾಗ, ಬಸ್ ಏರುವಾಗ ಯಾರೋ ಕಳ್ಳರು ಬನಿಯನ್ನ ಕಿಸೆಯನ್ನೇ ಕತ್ತರಿಸಿ 50 ಸಾವಿರ ರೂ ಹಣವನ್ನು ಲಪಟಾಯಿಸಿರುವುದು ಅರಿವಿಗೆ ಬಂದಿದೆ ಎಂದು ದೂರು ನೀಡಿದ್ದಾರೆ.
ಈ ಬಗ್ಗೆ ಅಪರಾಧ 0085/2023, ಐಪಿಸಿ ಸೆಕ್ಷನ್ 1860ರ ಕಲಂ 379ರ ಅಡಿ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.