ವಿಜಯಸಾಕ್ಷಿ ಸುದ್ದಿ, ಗದಗ:
ಲಾರಿ ಓವರ್ ಟೆಕ್ ಮಾಡಲು ಹೋಗಿ ಲಾರಿ ಚಕ್ರದಲ್ಲಿ ಬೈಕ್ ಸವಾರರಿಬ್ಬರು ಸಿಲುಕಿ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಮುಂಡರಗಿ ತಾಲ್ಲೂಕಿನ ಬೆಣ್ಣಿಹಳ್ಳಿ ಸಮೀಪ ನಡೆದಿದೆ.
ಮುಂಡರಗಿ ತಾಲ್ಲೂಕಿನ ಬಸಾಪುರ ಗ್ರಾಮದ ಹನಮಪ್ಪ ಪ್ರಕಾಶಪ್ಪ ಇದ್ಲಿ (40), ಫಕ್ಕೀರಪ್ಪ ಭೀಮಣ್ಣ ಇದ್ಲಿ(38) ಎಂಬ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಕೊರ್ಲಹಳ್ಳಿ ಗ್ರಾಮದ ಬೈಕ್ ಸವಾರರಾದ ದಾವಲಸಾಬ ಖಾಸಿಂಸಾಬ ಹಣಗಿ (26) ಹಾಗೂ ಲಾಲಸಾಬ ಮಾಬುಸಾಬ ಹಂಚಿನಾಳ(26) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಡರಗಿ ಕಡೆಯಿಂದ ಕೊರ್ಲಹಳ್ಳಿ ಕಡೆಗೆ ಹೊರಟಿದ್ದ ಲಾರಿಯನ್ನು ಲಾರಿ ಹಿಂಬದಿಯಲ್ಲಿದ್ದ ಗಾಯಾಳು ಬೈಕ್ ಸವಾರರು ಓವರ್ ಟೆಕ್ ಮಾಡಿದ್ದಾರೆ. ಈ ವೇಳೆ ಲಾರಿ ಎದುರಿಗೆ ಬರುತ್ತಿದ್ದ ಕೊರ್ಲಹಳ್ಳಿಯಿಂದ ಮುಂಡರಗಿ ಕಡೆಗೆ ಹೊರಟಿದ್ದ ಮೃತ ಬೈಕ್ ಸವಾರರ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಮುಂಡರಗಿ ಕಡೆಗೆ ಹೊರಟಿದ್ದ ಬೈಕ್ ಸವಾರರಿಬ್ಬರು ಲಾರಿ ಚಕ್ರಕ್ಕೆ ಸಿಲುಕಿ ಅಸುನೀಗಿದ್ದಾರೆ. ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೋರ್ವ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.