ಗದಗ ಜಿಲ್ಲೆಗೆ ಮತ್ತೊಂದು ಗರಿ, ಥರ್ಡ್- ಐ ಶೀಘ್ರ ಜಾರಿ; ಕಾನೂನು ಸಚಿವ ಎಚ್ ಕೆ ಪಾಟೀಲ್

0
Spread the love

ಬೆಂಗಳೂರು ನಂತರ ಗದಗನಲ್ಲಿ ಆರಂಭ….ಸಾರ್ವಜನಿಕರ ಪ್ರಶಂಸೆ………

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಗದಗನಲ್ಲಿ ಕಾನೂನು ವ್ಯವಸ್ಥೆ ಅತ್ಯಂತ ಸುವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಥರ್ಡ್ ಐ ಎಂಬ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶುಕ್ರವಾರದಂದು ಸೆಗ್‌ವೇ ಇಲೆಕ್ಟ್ರಿಕ್ ಬೈಕ್‌ಗಳ ಪ್ರಾಯೋಗಿಕ ಚಾಲನೆ ವೀಕ್ಷಿಸಿ ಸಚಿವ ಎಚ್.ಕೆ.ಪಾಟೀಲ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಥರ್ಡ್ ಐ ಯೋಜನೆಯಲ್ಲಿ ಸೆಗ್ ವೇ ಎಲೆಕ್ಟ್ರಿಕ್ ಬೈಕ್‌ಗಳು ಸಹ ಪೊಲೀಸ್ ಇಲಾಖೆಗೆ ಸಹಕಾರಿಯಾಗಿವೆ ಎಂದರು.

ಕಲೆ, ಸಂಸ್ಸೃತಿ, ಇತಿಹಾಸ, ಪರಂಪರೆಗೆ ಹೆಸರುವಾಸಿಯಾದ ಗದಗ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ನೆಲ. ಈ ಸ್ಥಳದಲ್ಲಿ ಕಾನೂನು ವ್ಯವಸ್ಥೆ ಉನ್ನತಮಟ್ಟದಲ್ಲಿ ಇರಬೇಕೆಂಬ ಸದುದ್ದೇಶದಿಂದ ಹಾಗೂ ಜನಸಾಮಾನ್ಯರಿಗೆ ಅನುಕೂಲ ಹಾಗೂ ಸಂರಕ್ಷಣೆಗಾಗಿ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಥರ್ಡ್ ಐ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಶಾಂತಿಯುತ, ಸುರಕ್ಷಿತ ಗದಗಿಗಾಗಿ ಥರ್ಡ್ ಐ ಸ್ಮಾರ್ಟ್ ಪೊಲೀಸ್ ಫಾರ್ ಸೇಫ್ ಗದಗ ಬೆಟಗೇರಿ ಯೋಜನೆಯ ಕಾಮಗಾರಿ ಈಗಾಗಲೇ ಆರಂಭಿಸಲಾಗಿದ್ದು, ಹಂತ ಹಂತವಾಗಿ ಈ ಯೋಜನೆಯನ್ನು ಪೂರ್ಣಗೊಳಿಸಿ ಜಾರಿಗೊಳಿಸಲಾಗುತ್ತಿದೆ.

ಈಗಾಗಲೇ ಪೊಲೀಸ್ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಕಮಾಂಡ್ ಸೆಂಟರ್, ಟ್ರಾಫಿಕ್ ಮ್ಯಾನ್ಭೆಜ್‌ಮೆಂಟ್, ಕ್ರೈಂ ಮುಂಜಾಗ್ರತೆಗಾಗಿ ಕ್ರ್ರಮವಹಿಸಿದೆ. ಗದಗ ಬೆಟಗೇರಿ ನಗರದ ಪ್ರಮುಖ ೪೪ ಸ್ಥಳಗಳಲ್ಲಿ ಬುಲೆಟ್ ಕ್ಯಾಮರಾ ಅಳವಡಿಸಿದೆ. ೪೦ ಕಿ.ಮೀ ಆಪ್ಟಿಕಲ್ ಫೈಬರ್ ಅಳವಡಿಸಿದ್ದು ೧೫ ಎಎಂಪಿಆರ್ ಸಿಸಿ ಟಿವಿ ಜೋಡಿಸಲಾಗಿದೆ. ಇದರಿಂದ ಒಟ್ಟಾರೆ ೪೫ ಸ್ಥಳಗಳನ್ನು ಕುಳಿತಲ್ಲಿಯೇ ನಿಗಾವಹಿಸಲಾಗುತ್ತಿದೆ. ಗದಗ ಬೆಟಗೇರಿ ನಗರಕ್ಕೆ ಬರುವ ಪ್ರತಿ ವಾಹನದ ಚಲನವಲನಗಳನ್ನು, ಮಾರ್ಗಗಳನ್ನು ವೀಕ್ಷಣೆ ಮಾಡಲು ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಇವುಗಳು ೩೬೦ ಡಿಗ್ರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇನ್ನೂ ಸೂಕ್ಷ್ಮ ಅತಿಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ನಗರೋತ್ಥಾನ, ಶಾಸಕರ ಅನುದಾನ, ಪ್ರವಾಸೋದ್ಯಮ ಇಲಾಖೆ, ನಗರಸಭೆಯಿಂದ ಅಗತ್ಯದ ಹಣಕಾಸಿನ ನೆರವು ಒದಗಿಸಲಾಗುವುದು. ಈಗಾಗಲೇ ಈ ಯೋಜನೆಗೆ ೧.೫೦ ಕೋಟಿ ವ್ಯಯಿಸಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ೧.೫೦ ಕೋಟಿ ರೂ. ಅನುದಾನವನ್ನು ಶೀಘ್ರವೇ ನೀಡಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು. ಇದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ , ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದರು.

ಥರ್ಡ್ ಐ ಯೋಜನೆಯನ್ನು ಬೆಂಗಳೂರು ಹೊರತುಪಡಿಸಿದರೆ ಗದಗನಲ್ಲಿಯೇ ಆರಂಭಿಸುತ್ತಿರುವುದು ವಿಶೇಷವಾಗಿದೆ. ಈ ಯೋಜನೆಯ ಅನುಷ್ಟಾನಗೊಳಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಅವರ ಶ್ರಮ ಹಾಗೂ ಸಹಕಾರ ನಿರಂತರವಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ವಾರ್ತಾಧಿಕಾರಿ ವಸಂತ ಬಿ ಮಡ್ಲೂರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here