ವಿಜಯಸಾಕ್ಷಿ ಸುದ್ದಿ, ಬೀದರ್
ಆಟೋಗೆ ಐಶರ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಆರು ಜನ ಮಹಿಳೆಯರು ಮೃತಪಟ್ಟು, ಹನ್ನೊಂದು ಜನ ಗಾಯಗೊಂಡ ದುರ್ಘಟನೆ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ.
ಪ್ರಭಾವತಿ ಗಂಡ ದೇವೇಂದ್ರ (36), ಯಾದಮ್ಮ ಗಂಡ ಅಷ್ಮಿತ (40), ಗುಂಡಮ್ಮ ಗಂಡ ನರಸಿಂಗ್ (60), ಜಗಮ್ಮಾ ಗಂಡ ಪ್ರಭು (34) ಹಾಗೂ ರುಕ್ಮಿಣಿ ಬಾಯಿ ಅಮೃತ (60) ಎಂಬುವವರು ದುರ್ಘಟನೆಯಲ್ಲಿ ಮೃತಪಟ್ಟ ದುರ್ಧೈವಿಗಳು. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದು, ಮೃತರು ಚಿಟಗುಪ್ಪಾ ತಾಲೂಕಿನ ಉಡುಬನಹಳ್ಳಿ ಗ್ರಾಮದವರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮಳಖೇಡಾ ಗ್ರಾಮದ ಸರಕಾರಿ ಶಾಲೆಯ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕೂಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ವೇಗವಾಗಿ ಬಂದ ತೆಲಂಗಾಣ ರಾಜ್ಯದ ಐಶರ್ ಗೂಡ್ಸ ವಾಹನ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.