ವಿಜಯಸಾಕ್ಷಿ ಸುದ್ದಿ, ಗದಗ
ಮನೆಯ ಅಪ್ಸ್ಟೇರ ಹತ್ತಿ, ಬಾಗಿಲಿನ ಬೋಲ್ಟನ್ನು ಯಾವುದೋ ಆಯುಧದಿಂದ ಮೀಟಿ ಒಳಸೇರಿ, ಕಬ್ಬಿಣದ ಡ್ರಾವರನ್ನು ಮೀಟಿ ತೆಗೆದು, ಒಳಗಿದ್ದ ಲಕ್ಷಾಂತರ ರೂ. ಹಣವನ್ನು ಹಾಗೂ ಟ್ರೆಝರಿಯಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಬಂಗಾರ ಹಾಗೂ ಬೆಳ್ಳಿಯ ಆಭರಣ, ವಸ್ತುಗಳ ಕಳ್ಳತನವಾಗಿರುವುದಾಗಿ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಆದರ್ಶ ನಗರದ ದೇವರಾಜ ಹಾಸ್ಟೆಲ್ ಸಮೀಪವಿರುವ ಸಮೃದ್ಧಿ ನಿಲಯದ ನಿವಾಸಿ ಈರಪ್ಪ ಸೋಮಪ್ಪ ಪೂಜಾರ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದು, ಯಾರೋ ಕಳ್ಳರು ಅ.1ರ ಮುಂಜಾನೆ 9 ಗಂಟೆಯಿಂದ ಅ.2ರ ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ.
ಮನೆಯ ಅಪ್ಸ್ಟೇರನ್ನು ಹತ್ತಿ, ಡುಪ್ಲೇಕ್ಸ್ ಮನೆಯ ಸಿಲ್ವರ್ ಡೋರಿನ ಬೋಲ್ಟನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು, ಕಟ್ಟಿಗೆಯ ಬಾಗಿಲಿನ ಒಳಚಿಲಕವನ್ನೂ ಮೀಟಿ, ಒಳಗೆ ಹೋಗಿ, ಬೆಡ್ರೂಮಿನ ಕಬ್ಬಿಣದ ಡ್ರಾವನ್ನು ಮೀಟಿ ಮುರಿದು, ಅದರಲ್ಲಿದ್ದ 6,91 ಲಕ್ಷ ರೂ. ನಗದನ್ನು ಕಳ್ಳತನ ಮಾಡಿದ್ದಾರೆ.
ಅಲ್ಲದೇ ಕೆಳಮನೆಯ ಬೆಡ್ರೂಮಿನಲ್ಲಿದ್ದ ಕಬ್ಬಿಣದ ಟ್ರೆಝರಿಯ ಬೀಗವನ್ನು ಮೀಟಿ ಮುರಿದು, ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ, ಒಳಗಿದ್ದ 1.75 ಲಕ್ಷ ರೂ. ಕಿಮ್ಮತ್ತಿನ ಒಟ್ಟೂ 67 ಗ್ರಾಂ. ತೂಕದ ಬಂಗಾರದ ಆಭರಣಗಳು, 7.50 ಲಕ್ಷ ರೂ. ಬೆಲೆಬಾಳುವ ಬೆಳ್ಳಿ ಸಾಮಾಗ್ರಿಗಳು, ಸಿಸಿಟಿವಿ ಕ್ಯಾಮೆರಾದ ೨೦ ಸಾವಿರ ರೂ. ಬೆಲೆಬಾಳುವ ಡಿವಿಆರ್ ಸಹಿತವಾಗಿ ಒಟ್ಟೂ 9.45 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.