ಬೈಕ್ ಸವಾರ ಸ್ಥಳದಲ್ಲಿಯೇ ಸಾವು….ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವು
ವಿಜಯಸಾಕ್ಷಿ ಸುದ್ದಿ, ರೋಣ/ಗದಗ
ವೇಗವಾಗಿ ಹೊರಟಿದ್ದ ಟಂಟಂ ರಿಕ್ಷಾ ವಾಹನವು ಎದುರಿಗೆ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ, ರಿಕ್ಷದಲ್ಲಿದ್ದ ಮತ್ತೊಬ್ಬ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ರೋಣ ಪಟ್ಟಣದ ಸಮೀಪ ಬದಾಮಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತರನ್ನು ರೋಣ ತಾಲೂಕಿನ ಹಿರೇಹಾಳ ಗ್ರಾಮದ ಅಮರಗೌಡ ತಂದೆ ಬಸನಗೌಡ ಗೌಡರ (30) ಹಾಗೂ ಶಾಂತಗೇರಿ ಗ್ರಾಮದ ಮುತ್ತಪ್ಪ ತಂದೆ ಬಾಳಪ್ಪ ಜಾಲಿಹಾಳ (27)ಎಂದು ಗುರುತಿಸಲಾಗಿದೆ.
ರೋಣ ಪಟ್ಟಣದಿಂದ ಬದಾಮಿ ಕಡೆ ಹೊರಟಿದ್ದ ಟಂಟಂ ರಿಕ್ಷಾ ವಾಹನವು ಎದುರಿಗೆ ಬಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಅಮರಗೌಡಗೆ ಬಲವಾದ ಪೆಟ್ಟು ಬಿದ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಟಂಟಂ ರಿಕ್ಷಾದಲ್ಲಿದ್ದ ಮುತ್ತಪ್ಪ ಜಾಲಿಹಾಳಗೆ ತೀವ್ರ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ರೋಣ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಾಗ ಮುತ್ತಪ್ಪ ಜಾಲಿಹಾಳ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ರೋಣ ಠಾಣೆಯ ಪಿಎಸ್ಐ ಚಂದ್ರಶೇಖರ ಹೆರಕಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ 279, 304 (ಎ)10/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.