ವಿಜಯಸಾಕ್ಷಿ ಸುದ್ದಿ, ಗದಗ:
ಚಿರತೆ ದಾಳಿಯಿಂದಾಗಿ ಹಸು ಬಲಿಯಾಗಿರುವ
ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನಾಗೇಂದ್ರಗಡ ಗ್ರಾಮದ ಬಳಿ ನಡೆದಿದೆ.
ಗ್ರಾಮದ ನಿಂಗಪ್ಪ ಎಂಬ ರೈತನಿಗೆ ಸೇರಿದ ಹಸು ಚಿರತೆ ದಾಳಿಗೆ ತುತ್ತಾಗಿದೆ. ಜಮೀನಿನಲ್ಲಿ ಹಸು ಕಟ್ಟಿ ಹೋಗಿದ್ದ ವೇಳೆ ಚಿರತೆ ಹಸು ಮೇಲೆ ದಾಳಿ ನಡೆಸಿ ತಿಂದು ಹಾಕಿದೆ.
ಗಜೇಂದ್ರಗಡ ತಾಲ್ಲೂಕಿನಾದ್ಯಂತ ಹೀಗೆ ಹಲವು ಬಾರಿ ಚಿರತೆ ದಾಳಿ ಮಾಡಿದೆ. ಈ ಹಿಂದಿನಿಂದಲೂ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಅಲ್ಲದೇ, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀಘ್ರವೇ ಚಿರತೆ ಸೆರೆ ಹಿಡಿಯುವಂತೆ ಅವರು ಒತ್ತಾಯಿಸಿದ್ದಾರೆ.
ಸುದ್ದಿ ತಿಳಿದ ಶಾಸಕ ಕಳಕಪ್ಪ ಬಂಡಿ, ಡಿಎಫ್ಒ ದೀಪಿಕಾ ಬಾಜಪೇಯಿ, ಎಸಿಎಫ್ ಪರಿಮಳ, ಗದಗ ಆರ್ ಎಫ್ ಒ ರಾಜು ಗೋಂದಕರ್, ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.