ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ತಾಕೀತು…….
ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಹಲವು ತಿಂಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ರಸ್ತೆಗೆ ಇಳಿದು ಹೋರಾಟ ಮಾಡಿದರೂ ನಗರಸಭೆ ಆಡಳಿತ ಸ್ಪಂದಿಸರಲಿಲ್ಲ.

ಆದರೆ ಇವತ್ತು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಕೆಡಿಪಿ ಸಭೆಯಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ನಗರಸಭೆ ಆಯುಕ್ತ ರಮೇಶ್ ಸುಣಗಾರ ಮಾಹಿತಿ ನೀಡಿದರು.

ಇದರಿಂದ ಆಕ್ರೋಶಗೊಂಡ ಸಂಕನೂರ, ಸಭೆಯಲ್ಲಿ ಸುಳ್ಳು ಮಾಹಿತಿ ನೀಡಬೇಡಿ, ಅವಳಿ ನಗರದಲ್ಲಿ ತಿಂಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು. ಅಷ್ಟೇ ಅಲ್ಲದೆ ಬಡ ಜನರ ಜೊತೆಗೆ ಚೆಲ್ಲಾಟವಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.

ನಗರಸಭೆ ಸದಸ್ಯರು, ವಾರ್ಡ್ ಗಳಲ್ಲಿ ಸುತ್ತಾಡೋದು ಕಷ್ಟ ಆಗಿದೆ, ನೀವು ಹುಡಗಾಟಿಕೆ ಮಾಡ್ತಾಯಿದ್ದೀರಾ ಎಂದು ಸಂಕನೂರ ಗರಂ ಆದರು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್, ತಕ್ಷಣವೇ ನಾಳೆಯಿಂದಲೇ ಅವಳಿ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿ ಎಂದು ತಾಕೀತು ಮಾಡಿದರು.

ಎರಡು ಹೆಲ್ಪ್ ಲೈನ್ ನಂಬರ್ ಮಾಡಿ, ಯಾರಿಗೆ ನೀರು ಬೇಕಾಗಿರುತ್ತೋ ಅವರು ಪೋನ್ ಮಾಡಿದ ತಕ್ಷಣ ಆ ವಾರ್ಡ್ ಗೆ ನೀರು ಪೂರೈಕೆ ಮಾಡಲು ಸಚಿವ ಎಚ್ ಕೆ ಪಾಟೀಲ್ ಸೂಚಿಸಿದರು.