ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ
ಗ್ರಾಮದಲ್ಲಿ ಯಾವುದೇ ವ್ಯಕ್ತಿಗಳು ರಾತ್ರಿ ವೇಳೆ ಮರಣ ಹೊಂದಿದರೆ ಅಹೋರಾತ್ರಿ ಭಜನೆ ಮಾಡಿ, ಮುಂಜಾನೆ ಮೆರವಣಿಗೆ ಮೂಲಕ ಅಂತ್ಯಸಂಸ್ಕಾರ ಮಾಡುವುದುಂಟು. ಆದರೆ ಇಲ್ಲಿಯ ಮಾರುತಿ ನಗರದಲ್ಲಿ ಕೋತಿಯೊಂದು ಸಂಜೆ ವೇಳೆ ಸಾವನ್ನಪ್ಪಿದ್ದು, ಮನುಷ್ಯರಂತೆಯೇ ವಿಧಿ-ವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇಲ್ಲಿಯ ಮಾರುತಿ ನಗರದ ಆಂಜನೇಯ ಭಜನಾ ಸಂಘದ ಕಾರ್ಯಕರ್ತರೇ ಈ ಎಲ್ಲ ವಿಧಿ-ವಿಧಾನಗಳನ್ನು ನೆರವೇರಿಸಿ ಸಾವನ್ನಪ್ಪಿದ ಕೋತಿಯ ಅಂತ್ಯಕ್ರಿಯೆ ಮಾಡಿದ್ದಾರೆ.
ಆಂಜನೇಯ ದೇವಾಸ್ಥಾನದ ಹತ್ತಿರ ಶುಕ್ರವಾರ ಸಂಜೆ 7ರ ಹೊತ್ತಿಗೆ ಕೋತಿಯೊಂದು ಆಕಸ್ಮಿಕವಾಗಿ ಸಾವನಪ್ಪಿತ್ತು. ಭಜನಾ ಸಂಘದ ಕಾರ್ಯಕರ್ತರು ದೇವಸ್ಥಾನ ಹತ್ತಿರ ಕುರ್ಚಿಯಲ್ಲಿ ಕುಳ್ಳಿರಿಸಿ, ವಿಧಿ-ವಿಧಾನಗಳೊಂದಿಗೆ ಪೂಜೆ ಸಲ್ಲಿಸಿದರು. ಅಹೋರಾತ್ರಿ ಭಜನಾ ಪದಗಳನ್ನು ಹಾಡುತ್ತಾ ಜಾಗರಣೆಯನ್ನೂ ನಡೆಸಿದರು.
ಶನಿವಾರ ಮುಂಜಾನೆ 7ಕ್ಕೆ ಮೆರವಣಿಗೆ ಮೂಲಕ ಪಕ್ಕದ ಜಮೀನಿನಲ್ಲಿ ಧಾರ್ಮಿಕ ವಿಧಿ-ವಿದಾನಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿ, ಮೃತ ಕೋತಿಯ ಆತ್ಮಕ್ಕೆ ಶಾಂತಿ ಕೋರಲಾಯಿತು ಎಂದು ಭಜನಾ ಸಂಘದ ಹಿರಿಯರು, ಗ್ರಾ ಪಂ ಸದಸ್ಯರಾದ ಲಕ್ಷ್ಮಣ ಗುಡಸಲಮನಿ, ಶಿವಪ್ಪ ಬಳಿಗೇರ ತಿಳಿಸಿದ್ದಾರೆ.