ವಿಜಯಸಾಕ್ಷಿ ಸುದ್ದಿ, ನರಗುಂದ
ಮೊನ್ನೆಯಷ್ಟೇ ಬೆಂಗಳೂರಿನ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಾಗ ಕಿಲೋಮೀಟರು ದೂರ ಓಡಿಯೇ ಹೋಗಿ ಚಿಕಿತ್ಸೆ ನೆರವೇರಿಸಿ ಕರ್ತವ್ಯಪ್ರಜ್ಞೆ ಮೆರೆದು ಮಾದರಿಯಾಗಿದ್ದರು.
ಇದೀಗ ನರಗುಂದ ತಾಲೂಕಿನ ಕೆ.ಇ.ಬಿ ಪವರ್ ಮ್ಯಾನ್ ಒಬ್ಬರು ಇಂಥದೇ ಕರ್ತವ್ಯ ಪ್ರಜ್ಞೆಯಿಂದ ಹರಿಯುವ ನೀರಿನಲ್ಲಿಯೇ ಈಜಿ, ಸಮಸ್ಯೆಯಿರುವ ಸ್ಥಳಕ್ಕೆ ತೆರಳಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಬಂದಿರುವ ಬಗ್ಗೆ ವರದಿಯಾಗಿದೆ.
ತಾಲೂಕಿನ ಕೊಣ್ಣೂರ ಗ್ರಾಮದ ಬಳಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತದೆ. ಹರಿವಿನ ಪ್ರಮಾಣ ಎಷ್ಟಿತ್ತೆಂದರೆ, ನದಿ ತುಂಬಿ ಸುತ್ತಲಿನ ಪ್ರದೇಶಗಳಲ್ಲಿಯೂ ನೀರು ಆವರಿಸಿಕೊಳ್ಳುತ್ತಿತ್ತು. ಈ ಸಂದರ್ಭದಲ್ಲಿ ಕೊಣ್ಣೂರ ಗ್ರಾಮಕ್ಕೆ ನೀರು ಪೂರೈಕೆಯ ಉದ್ದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್ ಫರ್ಮರ್ಗಳೂ ಮುಳುಗುವ ಸಂದರ್ಭ ಎದುರಾಗಿತ್ತು.
ಅಲ್ಲದೆ, ಈ ಸಂದರ್ಭದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅನಿವಾರ್ಯತೆಯಿತ್ತು.
ತಕ್ಷಣವೇ ಕಾರ್ಯಪ್ರವೃತ್ತರಾದ ಈ ಭಾಗದ ಪವರ್ ಮ್ಯಾನ್ ಮಂಜುನಾಥ ಕುಂಬಾರ ಸುಮಾರು 30 ಅಡಿ ದೂರ ನೀರಿನಲ್ಲಿ ಈಜಿಯೇ ಸ್ಥಳಕ್ಕೆ ತಲುಪಿದರು. ಕೆಳಗೆ ನೆಲದಿಂದ ಒಂದಾಳು ನೀರು ತುಂಬಿತ್ತು. ಸೂಕ್ತ ಸಮಯದಲ್ಲಿ ಪ್ರಸ್ತುತ ಟ್ರಾನ್ಸಫರ್ಮರ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂದಿರುಗಿದರು. ಇದರಿಂದ ಇದಕ್ಕೂ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುವದರಿಂದ ನೀರು ಸರಬರಾಜಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಅನುವು ಮಾಡಿದ್ದಾರೆ. ಮಂಜುನಾಥರ ಈ ಕಾರ್ಯಕ್ಕೆ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು ಶಹಬ್ಬಾಸ್ ಎಂದಿದ್ದಾರೆ.
ಕೂಡಲೇ ಈ ಟ್ರಾನ್ಸಫರ್ಮರ್ ನ ಸಂಪರ್ಕ ಕಡಿತಗೊಳಿಸದಿದ್ದರೆ, ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ತೊಂದರೆಯಾಗುವಂತಿತ್ತು. ಇದರ ಸಂಪರ್ಕ ಕಡಿತಗೊಳಿಸಿದಾಗ ಮುಂದಿನ ಟ್ರಾನ್ಸಫರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ನೀರು ಸರಬರಾಜು ಮುಂದುವರೆಯುತ್ತದೆ. ಪ್ರತಿ ಬಾರಿ ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದಾಗಲೂ ಈ ಸಮಸ್ಯೆ ಎದುರಾಗುತ್ತದೆ. ಆದರೆ, ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೂ ತೊಂದರೆ ಆಗಬಾರದೆಂಬುದು ಇಲಾಖೆಯ ಕಳಕಳಿ. ಹೀಗಾಗಿ ಈ ಅಪಾಯವನ್ನು ಎದುರಿಸಲು ತಯಾರಾದೆ.
-ಮಂಜುನಾಥ ಕುಂಬಾರ. ಹೆಸ್ಕಾಂ ಪವರ್ ಮ್ಯಾನ್, ಕೊಣ್ಣೂರ