-ಕಣ್ಮುಚ್ಚಿದ ನಾಯಿಮರಿ; ಕಂಡಕಂಡವರ ಮೇಲೆ ಎರಗಲು ಮುಂದಾಗುತ್ತಿದ್ದ ಮಂಗ!
ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಸುಮಾರು ಹತ್ತು ದಿನಗಳಿಂದ ನಾಯಿಮರಿ ಹೊತ್ತು ಥೇಟ್ ತನ್ನ ಸಂತಾನವೆಂಬಂತೆ ಸಾಕುತ್ತಿದ್ದ ಮಂಗಣ್ಣ ಈಗ ದುಃಖದ ಜೊತೆಗೆ ಆಕ್ರೋಶಗೊಂಡ ಕಂಡಕಂಡವರ ಮೇಲೆ ಎರಗಲು ಮುಂದಾಗಿತ್ತು. ಮಂಗಣ್ಣನ ಈ ಸ್ಥಿತಿಗೆ ಕಾರಣ, ನಾಯಿಮರಿಯ ಮರಣ!
ಇದನ್ನೂ ಓದಿ ಕಣ್ಮುಚ್ಚಿದ ನಾಯಿಮರಿ; ದುಃಖದ ಜೊತೆ ಆಕ್ರೋಶಗೊಂಡ ಮಂಗಣ್ಣ!
ಹೌದು.. ಆಗಷ್ಟೇ ಜನಿಸಿ, ಇನ್ನೂ ಕಣ್ಣು ಬಿಡದ ಪುಟ್ಟ ನಾಯಿಮರಿಯನ್ನು ಮಂಗಣ್ಣ ತನ್ನ ಕಂಕುಳಲ್ಲಿ ಇಟ್ಟುಕೊಂಡು ನಗರದ ಹಾತಲಗೇರಿ ರಸ್ತೆಯ ವಿವೇಕಾನಂದ ರಸ್ತೆಯ ಬಡಾವಣೆಗಳಲ್ಲಿ ಓಡಾಡುತ್ತಿತ್ತು. ಈ ಬಗ್ಗೆ ವಿಜಯಸಾಕ್ಷಿ ವರದಿ ಮಾಡಿತ್ತು.
ಇದು ಮಂಗಣ್ಣನ ಮಮಕಾರವೋ? ನಾಯಿಮರಿಯ ಸಂಕಟವೋ? ಎಂಬ ದ್ವಂದ್ವ ಜನರಲ್ಲಿತ್ತು. ಮಂಗಣ್ಣ ಆ ನಾಯಿಮರಿಯನ್ನು ಹೀಗೇ ಹೊತ್ತು ತಿರುಗಿದರೆ ತೊಂದರೆ ಉದ್ಭವಿಸುವ ಆತಂಕವೂ ಜನರದ್ದಾಗಿತ್ತು. ಹಾಗಾಗಿ ಜನ ನಾಯಿಮರಿಯನ್ನು ಮಂಗಣ್ಣನಿಂದ ಬಿಡಿಸಲು ಶತಾಯಗತಾಯ ಪ್ರಯತ್ನ ಮಾಡಿದರೂ ಮಂಗಣ್ಣ ಯಾರನ್ನೂ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ.
ಕೊನೆಗೂ ಜನರ ಆತಂಕ ನಿಜವಾಗಿದೆ. ನಾಯಿಮರಿ ಅಸುನೀಗಿದೆ. ಇದರಿಂದ ದುಃಖದ ಜೊತೆಗೆ ಮತ್ತಷ್ಟೂ ಆಕ್ರೋಶಗೊಂಡಿರುವ ಮಂಗಣ್ಣ ಹತ್ತಿರ ಬಂದವರ ಮೇಲೆ ಎರಗಿ ಕ್ರೋಧ ವ್ಯಕ್ತಪಡಿಸುತ್ತಿತ್ತು ಎನ್ನಲಾಗಿದೆ.
ನಾಯಿಮರಿಯ ಜೀವ ಹೋದರೂ ಜೊತೆಯಲ್ಲೇ ಕರೆದೊಯ್ಯುತ್ತಿರುವ ಮಂಗಣ್ಣನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯಾಧಿಕಾರಿಗಳ ತಂಡ “ಆಪರೇಷನ್ ಮಂಕಿ” ಕಾರ್ಯಾಚರಣೆ ನಡೆಸಿ ಈಗ ಕಪ್ಪತಗುಡ್ಡಕ್ಕೆ ಬಿಟ್ಟು ಬಂದಿದ್ದಾರೆ.
ಅರವಳಿಕೆ ಚುಚ್ಚುಮದ್ದು ನೀಡಿದಾಗ ಬಲೆಗೆ ಬಿತ್ತು ಮಂಗ!:
ಸತ್ತ ನಾಯಿಮರಿಯನ್ನೇ ಹೊತ್ತು ತಿರುಗುತ್ತಿದ್ದ ಮಂಗಣ್ಣನ ಸ್ವಭಾವ ಸಂಪೂರ್ಣ ಬದಲಾಗಿತ್ತು. ಯಾರಾದರೂ ಹತ್ತಿರಕ್ಕೆ ಹೋದರೆ ದಾಳಿ ಮಾಡಲು ಮುಂದಾಗುತ್ತಿತ್ತು. ಹಾಗಾಗಿ ಸೋಮವಾರ ಮಧ್ಯಾಹ್ನದಿಂದ ಮಂಗನನ್ನು ಬಲೆಗೆ ಬೀಳಿಸುವ ಕೆಲಸ ಸುಲಭದ್ದಾಗಿರಲಿಲ್ಲ.
ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪಶು ವೈದ್ಯಕೀಯ ಸಿಬ್ಬಂದಿ ಸೇರಿ ಚರ್ಚಿಸಿ ಮಂಗನ ಪ್ರಾಣಕ್ಕೆ ಅಪಾಯ ಒದಗದಂತೆ ಅರವಳಿಕೆ ಚುಚ್ಚುಮದ್ದು ನೀಡಲು ನಿರ್ಧರಿಸಿದರು. ಗನ್ ಮೂಲಕ ದೂರದಿಂದ ಅರವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಮಂಗಣ್ಣ ಅರೆಪ್ರಜ್ಞಾವಸ್ಥೆಗೆ ಜಾರಿದ ಆನಂತರ ಬಲೆಯಲ್ಲಿ ಹಾಕಿ ಕಪ್ಪತ್ತಗುಡ್ಡ ವನದಲ್ಲಿ ಬಿಟ್ಟು ಬರಲಾಯಿತು.
ಆಪರೇಷನ್ ಮಂಕಿ ಸಕ್ಸಸ್
ಆಪರೇಷನ್ ಮಂಕಿ ಕಾರ್ಯಾಚರಣೆ ಯಶಸ್ವಿಯಾಗಲು ಗದಗ ಪಾಲಿಕ್ಲಿನಿಕ್ನ ಪಶುವೈದ್ಯಾಧಿಕಾರಿ ಡಾ.ಜಟ್ಟೆನ್ನವರ್, ಗದಗ ಮೃಗಾಲಯದ ಪಶು ವೈದ್ಯಕೀಯ ಸಹಾಯಕ ನಿಖಿಲ್ ಕುಲಕರ್ಣಿ, ಉಪವಲಯ ಅರಣ್ಯಾಧಿಕಾರಿ ಎಂ.ಎಸ್. ನಾಗಮ್ಮನವರ್, ಅರಣ್ಯ ರಕ್ಷಕರು ಶರಣಪ್ಪ ನೀರಲಗಿ, ಅರಣ್ಯ ಸಿಬ್ಬಂದಿ ಹನುಮಂತಗೌಡ ಪಾಟೀಲ ಶ್ರಮಿಸಿದರು.
“ಕೆಲವೊಮ್ಮೆ ಕೆಲವೊಂದು ಪ್ರಾಣಿಗಳಲ್ಲಿ ವಿಚಿತ್ರ ವರ್ತನೆ ಕಾಣುತ್ತದೆ. ಕೆಲ ಮಂಗಗಳು ಕೇವಲ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡುತ್ತವೆ. ಅದಕ್ಕೆ ಪ್ರಾಣಿಗಳ ಬದುಕಿನಲ್ಲಿ ಏನೋ ಘಟನೆ ನಡೆದಿರುತ್ತದೆ. ಆಗ ಈ ರೀತಿಯ ವರ್ತನೆಗಳು ಕಾಣಿಸುತ್ತವೆ. ಸೆರೆ ಹಿಡಿದ ಮಂಗನಿಗೆ ಹುಚ್ಚು ಹಿಡಿದಿರಿಲಿಲ್ಲ. ನಾಯಿಮರಿ ಹೊತ್ತು ತಿರುಗುತ್ತಿದ್ದ ಬಗ್ಗೆ ನಿಖರವಾಗಿ ಹೇಳಲಾಗದು.”
-ನಿಖಿಲ್ ಕುಲಕರ್ಣಿ, ಪಶು ವೈದ್ಯಕೀಯ ಸಹಾಯಕ, ಗದಗ ಮೃಗಾಲಯ.