ವಿಜಯಸಾಕ್ಷಿ ಸುದ್ದಿ, ಗದಗ
ಆ ಗ್ರಾಮದಲ್ಲಿ ಅಂದು ಎಲ್ಲರೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದರು. ಆದರೆ ಬಿಜೆಪಿ ಮುಖಂಡನೆನ್ನಲಾದ ವ್ಯಕ್ತಿಯೊಬ್ಬ ಮಾಡಿದ ಅವಘಡದಿಂದ ಇಡೀ ಊರಿಗೆ ಊರಿನ ಜನರೇ ಒಂದು ಕ್ಷಣ ದಂಗಾಗಿಬಿಟ್ಟರು. ಆ ಕ್ಷಣದಲ್ಲಿ ಅದೇನ ಅನಾಹುತ ಆಗುತ್ತೋ ಅಂತ ಉಸಿರು ಬಿಗಿ ಹಿಡಿದಿದ್ದರು. ಆಗ ಪೊಲೀಸರು ಹಾಗೂ ERSS112 ನ ಸಿಬ್ಬಂದಿ ಬಂದು ಬಿಜೆಪಿ ಮುಖಂಡನ ಹಿಡಿದು ನರಗುಂದ ಠಾಣೆಗೆ ಕರೆದೊಯ್ದರು. ಆಗ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು ಎನ್ನಲಾಗಿದೆ.

ಇಷ್ಟೆಕ್ಕೆಲ್ಲಾ ಕಾರಣವಾಗಿದ್ದು ಬಿಜೆಪಿ ಮುಖಂಡನ ಗನ್ ಪ್ರಹಸನ.

ಇದೆಲ್ಲಾ ನಡೆದಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ. ಆಗಸ್ಟ್ 15 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಪೊಲೀಸರು ಕೂಡ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಪ್ರಕರಣದ ಕುರಿತು ಡಿವೈಎಸ್ಪಿ ಏಗನಗೌಡರ್, ಇನ್ಸ್ಪೆಕ್ಟರ್ ಮಲ್ಲಯ್ಯ ಮಠಪತಿ ಸಾಹೇಬರು ತುಟಿ ಬಿಚ್ಚುತ್ತಿಲ್ಲ. ಡಿವೈಎಸ್ಪಿ ಏಗನಗೌಡರಿಗೆ
ಕರೆ ಮಾಡಿ, ಹದ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಓಡಾಡಿದ ಬಗ್ಗೆ ಮಾಹಿತಿ ಕೇಳಿದಾಗ, ಅದು ಗನ್ ಅಲ್ಲ ಆಟಿಕೆ ಸಾಮಾನು ಅಂದ್ರು, ಮತ್ತೆ ಪ್ರಶ್ನೆ ಮಾಡಿದಾಗ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಇನ್ಸ್ಪೆಕ್ಟರ್ ಗೆ ಕೇಳಿ ಎಂದರು.
ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇನ್ಸ್ಪೆಕ್ಟರ್ ಮಠಪತಿ ಸಾಹೇಬರ ಸರಕಾರಿ ನಂಬರ್-9480804456 ಕರೆ ಮಾಡಿದಾಗ ಕರೆ ಸ್ವೀಕರಿಸಿ, ಗನ್ ಘಟನೆಯ ಬಗ್ಗೆ ಮಾಹಿತಿ ಕೇಳುತ್ತಿದ್ದಂತೆಯೇ ಕರೆ ಕಟ್ ಮಾಡಿದರು. ಮತ್ತೇರಡು ದಿನ ಇನ್ಸ್ಪೆಕ್ಟರ್ ಮಠಪತಿ ಸಾಹೇಬರಿಗೆ,ಪೋನ್ ಕರೆ ಮಾಡಿದಾಗಲೂ ಸ್ವೀಕರಿಸುವ ಸೌಜನ್ಯ ತೋರಿಸಲಿಲ್ಲ. ಇದರಿಂದಾಗಿ ಬಿಜೆಪಿ ಮುಖಂಡನ ಗನ್ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡ್ತಾ ಇದಾರಾ ಅನ್ನೋ ಅನುಮಾನ ಮೂಡುವಂತಾಗಿದೆ. ಆ ಮೂಲಕ ಬಿಜೆಪಿ ಮುಖಂಡನಿಗೆ ನಿಷ್ಠೆ ತೋರಿದರಾ? ಅಥವಾ ಯಾರಾದಾದರೂ ಪ್ರಭಾವಕ್ಕೆ ಒಳಗಾಗಿ ಪ್ರಕರಣ ಮುಚ್ಚಿ ಹಾಕಲು ಮುಂದಾದ್ರಾ ಅನ್ನೋ ಮಾತು ಕೇಳಿ ಬಂದಿದೆ. ಇನ್ನಾದರೂ ಆ ಮುಖಂಡ ಯಾರು? ಯಾವ ಕಾರಣಕ್ಕಾಗಿ ಗನ್ ಹಿಡಿದು ಓಡಾಡಿದ? ಅವತ್ತು ನಿಜವಾಗಿಯೂ ನಡೆದ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳು ಪತ್ತೆ ಹಚ್ಚಬೇಕಾಗಿದೆ.
ಪ್ರಕರಣದ ಹಿನ್ನೆಲೆ
ಆಗಸ್ಟ್ 15 ರಂದು ಸಮುದಾಯವೊಂದರ ಸಂಘದ ಕಛೇರಿಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಧ್ವಜಾರೋಹಣ ಇತ್ತು. ಆದರೆ ಬಿಜೆಪಿ ಮುಖಂಡನಿಗೆ ಈ ಬಾರಿ ಕರೆದಿರಲಿಲ್ಲವಂತೆ. ಬೇರೆದವರೊಬ್ಬರಿಂದ ಈ ಧ್ವಜಾರೋಹಣ ಮಾಡಿಸಿದ್ದಕಾಗಿ ಇಡೀ ಗ್ರಾಮಸ್ತರನ್ನ ಒಂದು ಗಂಟೆಗಳ ಕಾಲ ಆತಂಕದಲ್ಲಿ ದೂಡಿದ್ದ ಮುಖಂಡ, ಗನ್ ತಗೊಂಡು ಧ್ವಜಾರೋಹಣ ಮಾಡಲು ಬಂದಿದ್ದ ವ್ಯಕ್ತಿಗೆ ಹೆದರಿಸಿದ್ದಾನೆ. ಅಷ್ಟೇ ಅಲ್ಲದೇ ಆತನ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿದ್ದು, ಇದರಿಂದಾಗಿ ಧ್ವಜಾರೋಹಣಕ್ಕೆ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆದರಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.