ವಿಜಯಸಾಕ್ಷಿ ಸುದ್ದಿ, ಗದಗ
ಇವತ್ತು ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ. ಮನೆಯವರೆಲ್ಲ ಧ್ವಜಾರೋಹಣದ ಸಡಗರದಲ್ಲಿದ್ದಾಗ ಹಿಂಬಾಗಿಲಿನ ಚಿಲಕ ಮುರಿದು 5 ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ಕಳ್ಳತನವಾದ ಘಟನೆ ಸೋಮವಾರ ನಗರದ ಹುಡ್ಕೋ ಕಾಲೋನಿಯ ಮೂರನೇ ಕ್ರಾಸ್ನಲ್ಲಿ ಬೆಳಿಗ್ಗೆ ನಡೆದಿದೆ.

ಕಿವಿಯೋಲೆ, ಬಳೆ ಹಾಗೂ ಮಾಂಗಲ್ಯ ಸರ ಸೇರಿದಂತೆ 250 ಗ್ರಾಮ ಚಿನ್ನಾಭರಣ ದೋಚಿದ್ದಾರೆ. ಬೆಳ್ಳಿಯ ಸಾಮಾನುಗಳನ್ನು ಮುಟ್ಟದೇ ಕೇವಲ ಬಂಗಾರ ಹಾಗೂ ನಗದು ಮಾತ್ರ ಕಳ್ಳರು ದೋಚಿದ್ದಾರೆ.
ಶಿರಹಟ್ಟಿ ತಾಲೂಕಿನ ಮಾಗಡಿ ಬಳಿಯ ಪರಸಾಪುರ ಗ್ರಾಮದ ಬಳಿ ಸ್ಟೋನ್ ಕ್ರಸರ್ ಹೊಂದಿರುವ ಬಸವರಾಜ್ ಎಸ್ ರಾಯಪುರ ಎಂಬುವವರದೇ ಮನೆ ಕಳ್ಳತನವಾಗಿದೆ.

ಖದೀಮರು ವಿಗ್ ಧರಿಸಿ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದರು ಎಂದು ಹೇಳಲಾಗುತ್ತಿದ್ದು, ಕಳ್ಳರು ರಸ್ತೆಯಲ್ಲಿ ಸಂಚರಿಸುವ ಚಲನವಲನಗಳು ಅದೇ ಪ್ರದೇಶದ ಮನೆಯೊಂದರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ.
ಧ್ವಜಾರೋಹಣ ಮುಗಿಸಿ ಅರ್ಧ ಗಂಟೆಯಲ್ಲಿಯೇ ಮನೆಗೆ ಮರಳಿ ನೋಡಿದಾಗ ಹಿಂದಿನ ಬಾಗಿಲ ತೆರದಿದ್ದು ನೋಡಿ ಗಾಬರಿ ಬಿದ್ದು ಬೆಡ್ ರೂಮ್, ಮಹಡಿ ಮನೆಯ ಬೆಡರೂಮನ್ ಕಪಾಟು ತೆರದಿದ್ದು ನೋಡಿ ಬೆಚ್ಚಿ ಬಿದ್ದಿದ್ದಾರೆ. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಸಿಪಿಐ ಸುಬ್ಬಾಪೂರಮಠ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಕೇವಲ ಅರ್ಧಗಂಟೆಯಲ್ಲಿ ನಡೆದ ಕಳ್ಳರ ಕರಾಮತ್ ಗೆ ಮನೆ ಮಾಲೀಕ ಬಸವರಾಜ್ ದಂಪತಿ ದಂಗಾಗಿದ್ದು, ಹಾಡುಹಗಲೇ ಈ ರೀತಿ ಕಳ್ಳತನ ನಡೆದರೆ ಹೇಗೆ ಎಂದು ಮಾಧ್ಯಮದವರ ಮುಂದೆ ಆತಂಕ ವ್ಯಕ್ತಪಡಿಸಿದರು.