ಅರಣ್ಯ ಇಲಾಖೆಯ ನಿರಂತರ ಕಾರ್ಯಚರಣೆ ಯಶಸ್ವಿ
ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ ಹಲವಾರು ತಿಂಗಳಿಂದ ಜನರನ್ನು, ಅದರಲ್ಲೂ ರೈತ ಸಮುದಾಯಕ್ಕೆ ಕಂಟಕವಾಗಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಸೇರಿದಂತೆ ಅಕ್ಕಪಕ್ಕ ಗುಡ್ಡದಲ್ಲಿ ಚಿರತೆಯ ಉಪಟಳ ಹೆಚ್ಚಾಗಿತ್ತು. ರೈತರು ತಮ್ಮ ಜಮೀನಿನಲ್ಲಿ ಜಾನುವಾರು ಬಿಡಲು ಹೆದರುತ್ತಿದ್ದರು.
ಕಳೆದ ಸೆಪ್ಟೆಂಬರ್ 30 ರಂದು ಎರಡು ಹಸುಗಳನ್ನು ಚಿರತೆ ಬಲಿ ಪಡೆದಿತ್ತು. ಇದರಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಅರಣ್ಯ ಇಲಾಖೆಯ ಇದನ್ನು ಗಂಭೀರವಾಗಿ ಪರಿಗಣಿಸಿ ಬೋನ್ ಇಟ್ಟು ನಿರಂತರವಾಗಿ ಕಾರ್ಯಚರಣೆ ನಡೆಸಿದ್ದರು.
ಸೋಮವಾರ ಬೆಳಗಿನ ಜಾವ ನಾಗೇಂದ್ರಗಡ ಪಕ್ಕದ ಮಾಲಗತ್ತಿ ಗ್ರಾಮದ ಗುಡ್ಡದಲ್ಲಿ ಬೋನ್ ನಲ್ಲಿ ಚಿರತೆ ಕಂಡು ಬಂದಿದ್ದು, ರೈತರ ಹರ್ಷಕ್ಕೆ ಪಾರವೇ ಇಲ್ಲ.
ಅರಣ್ಯ ಇಲಾಖೆಯ ವಲಯ ಅಧಿಕಾರಿ ಮಂಜುನಾಥ್ ಮೇಗಲಮನಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಇದ್ದರು.