ವಿಜಯಸಾಕ್ಷಿ ಸುದ್ದಿ, ಬೆಟಗೇರಿ
ಇತ್ತೀಚೆಗಷ್ಟೇ ಗದಗ ನಗರದ ಐಡಿಬಿಐ ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡವಿಟ್ಟು ಮೋಸ ಮಾಡಿದ ಆರೋಪಿಗಳು ಸಿಕ್ಕಿಬೀಳುವ ಮುನ್ನವೇ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ. ಇಲ್ಲಿನ ಬ್ಯಾಂಕೊಂದರಲ್ಲಿ ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಕೋಟ್ಯಂತರ ರೂ. ಸಾಲ ಪಡೆದು ಮೋಸವೆಸಗಿರುವ ಬಗ್ಗೆ ಬೆಟಗೇರಿ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.
ಭೂಮರಡ್ಡಿ ವೃತ್ತದ ಬಳಿಯಿರುವ ಯೂನಿಯನ್ ಬ್ಯಾಂಕ್ನ ಗಿರೀಶ್ ಈರಣ್ಣ ಕೇಶಟ್ಟಿ ಪ್ರಕರಣದ ಕುರಿತು ನೀಡಿದ ದೂರಿನಲ್ಲಿ, ಜುಲೈ 7ರ ಮುಂಜಾನೆ 10.30ರಿಂದ ಜುಲೈ 27ರ ಸಂಜೆ 5 ಗಂಟೆಯ ನಡುವಿನ ಸಮಯದಲ್ಲಿ ಜವಳಗಲ್ಲಿಯ ಮಾಣಿಕ ಲಕ್ಕುಂಡಿ, ತಳಗೇರಿ ಓಣಿಯ ನಾಗರಾಜ ಪೆದ್ದಪ್ಪ ರಾಮಗಿರಿ, ರಾಘವೇಂದ್ರ ನೀರಲಕೇರಿ, ವೆಲ್ಫೇರ್ ಟೌನ್ಶಿಪ್ನ ಸುಚೀತ್ಕುಮಾರ್ ಹರಿವಾನ, ತೆಗ್ಗಿನಪೇಟೆಯ ನಿಹಾಲ್ ಕಬಾಡಿ, ಎಸ್.ಎಂ.ಕೃಷ್ಣ ನಗರದ ಗಣೇಶ.ಪಿ. ಮಾದರ,
ಜವಳಗಲ್ಲಿಯ ಹಮೀದಾಬೇಗಂ ಬಡೇಖಾನ, ಎಸ್.ಎಂ.ಕೃಷ್ಣ ನಗರದ ಸಂತೋಷ ವೀರಶಟ್ಟಿ, ಗಣೇಶ ಕಾಶಪ್ಪ ಹೊಂಬಳ, ಸಿದ್ದರಾಮೇಶ್ವರ ನಗರದ ಮಂಜುನಾಥ ಯಲ್ಲಪ್ಪ ಮಣ್ಣವಡ್ಡರ ಇವರೆಲ್ಲರೂ ಸೇರಿಕೊಂಡು ಬಂಗಾರದ ಲೇಪನವಿರುವ 4983.2 ಗ್ರಾಂ ತೂಕದ ಆಭರಣಗಳನ್ನು ತೋರಿಸಿ, ಅದನ್ನು ಯೂನಿಯನ್ ಬ್ಯಾಂಕ್ನಲ್ಲಿ ಅಡವಿಟ್ಟು 1,57,66,253 ರೂ ಸಾಲ ಪಡೆದು ಮೋಸ ಮಾಡಿದ್ದಾರೆ.
ಈ ಎಲ್ಲ 10 ಜನ ಆರೋಪಿಗಳೊಂದಿಗೆ 11ನೇ ಆರೋಪಿ, ಬ್ಯಾಂಕಿನ ಜ್ಯುವೆಲ್ ಅಪ್ರೇಜರ್-ವಿಮಲೇಶ ಜ್ಯುವೆಲರ್ಸ್ನ ಸುರೇಶ ಗೋಪಾಲ ರೇವಣಕರ ಕೂಡ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದು, ಆಭರಣಗಳು 22ಕ್ಯಾರೆಟ್ನವು ಎಂದು ಸುಳ್ಳು ಪ್ರಮಾಣಪತ್ರ ನೀಡುವುದರೊಂದಿಗೆ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.