ಐದು ಕಾರುಗಳು, ಏರ್ ಗನ್, ಮೊಬೈಲ್, ಲ್ಯಾಪ್ಟಾಪ್ಗಳೂ ವಶ
ವಿಜಯಸಾಕ್ಷಿ ಸುದ್ದಿ, ಹಾವೇರಿ
ಬೇನಾಮಿ ಹಣ ಸಾಗಣೆ ಮಾಡುವವರನ್ನು ಹಾಗೂ ಬಂಗಾರದ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಕೃತ್ಯದಲ್ಲಿ ತೊಡಗಿದ್ದ ಅಂತರ್ ರಾಜ್ಯ ದರೋಡೆಕೋರರ ತಂಡವನ್ನು ಬಂಧಿಸಿರುವ ಹಾವೇರಿ ಪೊಲೀಸರು ಬಂಧಿತರಿಂದ ಒಂದು ಕೋಟಿಗೂ ಅಧಿಕ ನಗದು, ಐದು ಕಾರುಗಳು, ಒಂದು ಏರ್ ಗನ್, 6 ಮೊಬೈಲ್ ಫೋನ್ಗಳು ಹಾಗೂ 3 ಲ್ಯಾಪ್ಟಾಪ್ಗಳೂ ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಅಂತೋನಿ ಅಲಿಯಾಸ್ ಅಂಟಪ್ಪನ್(22 ವರ್ಷ), ಅಬ್ಬಾಸ್ ಇ.ಎಸ್ ಪಿರಾಯಿರಿ(38 ವರ್ಷ), ನಿಶಾದಬಾಬು ಅಲಿಯಾಸ್ ಬಾಬು.ಟಿ(47 ವರ್ಷ) ಮತ್ತು ಭರತಕುಮಾರ ಅಲಿಯಾಸ್ ಕುಟ್ಟಾ(29 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.
ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣವೊಂದರ ಜಾಡು ಹಿಡಿದ ಪೊಲೀಸರು ಹಾವೇರಿ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಿರುದ್ಧ ಬ್ಯಾಡಗಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಡಿವೈಎಸ್ಪಿ ಶಿವಾನಂದ ಚಲವಾದಿ, ಸಿಪಿಐಗಳಾದ ಸಿದ್ದಾರೂಢ ಬಡಿಗೇರ, ಸಂತೋಷ ಪಾಟೀಲ ನೇತೃತ್ವದ ತಂಡ ಇದೀಗ ಆರೋಪಿಗಳನ್ನು ಬಂಧಿಸಿದೆ.