ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಭಾವೈಕ್ಯತೆಯ ನಾಡು. ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಜಿಲ್ಲೆ. ಆದರೆ, ಇತ್ತೀಚೆಗೆ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗುವ ಘಟನೆಗಳು ನಡೆಯುತ್ತಿವೆ. ಇಷ್ಟು ದಿವಸ ದಕ್ಷಿಣ ಕನ್ನಡ ಭಾಗದಲ್ಲಷ್ಟೇ ಕೇಳಿ ಬರುತ್ತಿದ್ದ ಹಿಜಾಬ್, ಕೇಸರಿ ಶಾಲು ನಿಷೇಧದ ಧ್ವನಿ ಇದೀಗ ಗದಗ-ಬೆಟಗೇರಿ ನಗರಕ್ಕೂ ಕಾಲಿಟ್ಟಿದೆ.

ಹೌದು, ಗದಗನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬಂದಿದ್ದರು. ಇದಕ್ಕೆ ಪ್ರತಿರೋಧವೊಡ್ಡಿದ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾದರು. ಇದು ವಿದ್ಯಾರ್ಥಿಗಳ ಮಧ್ಯೆ ಧರ್ಮ ಸಂಘರ್ಷಕ್ಕೆ ಕಾರಣವಾಯಿತು.
ಇನ್ನು ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾಗಿದ್ದರೂ ಉಪನ್ಯಾಸಕರು ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳದಿರುವುದು ದುರಾದೃಷ್ಟಕರ ಸಂಗತಿ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ನಿಖಿತಾ ಸುತಾರ್ ಹಾಗೂ ಕವಿತಾ, ‘ನಾವು ನಮ್ಮತನ ಬಿಟ್ಟು ಕೊಡಲು ಸಾಧ್ಯವಿಲ್ಲ. ಹಿಂದೂ ಧರ್ಮ ಅವಹೇಳನ ಮಾಡಿದಾಗ ಧರ್ಮ ಉಳಿಸುವುದು ನಮ್ಮ ಕರ್ತವ್ಯ. ಅವರು ಹಿಜಾಬ್ ಹಾಕಿಕೊಂಡು ಬರುವುದನ್ನು ಬಿಟ್ಟರೆ, ನಾವು ಕೇಸರಿ ಶಾಲು ಹಾಕಿಕೊಂಡು ಬರುವುದಿಲ್ಲ. ಅವರಿಗೆ ಅವರ ಧರ್ಮ ಎಷ್ಟು ಮುಖ್ಯವೋ, ನಮಗೂ ನಮ್ಮ ಧರ್ಮ ಅಷ್ಟೇ ಮುಖ್ಯ. ಹಿಜಾಬ್ ನಿಷೇಧ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಕಾಲೇಜಿನಲ್ಲಿ ಹಿಜಾಬ್ ಹಾಕಿಕೊಂಡು ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದಿವಸ ಇಲ್ಲದ ಧರ್ಮ ಈಗ್ಯಾಕೆ?’ ಎಂದು ಪ್ರಶ್ನಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಆಯಿಶಾ, ‘ಸಣ್ಣವರಿದ್ದಾಗ ಹಿಜಾಬ್, ಬುರ್ಕಾ ಹಾಕಿಕೊಂಡು ಬರುತ್ತಿದ್ದೇವೆ. ಹೀಗಾಗಿ ಹಿಜಾಬ್ ಬಿಡುವುದಿಲ್ಲ. ಸರ್ಕಾರ ಈ ಬಗ್ಗೆ ಏನೇ ಆದೇಶ ಮಾಡಿದರೂ, ನಾವು ಹಿಜಾಬ್ ಹಾಕಿಕೊಂಡು ಬರುವುದನ್ನು ಬಿಡುವುದಿಲ್ಲ. ಏಕೆಂದರೆ ನಾವು ಇಸ್ಲಾಂ ಧರ್ಮದ ಪ್ರಕಾರ ನಡೆಯುತ್ತೇವೆ. ನೀವು ನಿಮ್ಮ ಧರ್ಮ ಬಿಟ್ಟು ಕೊಡುತ್ತೀರಾ?. ನಾವು ಸರ್ಕಾರದ ಆದೇಶ ಪಾಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಕಾಲೇಜಿನಲ್ಲಿ ಮೊದಲೆಲ್ಲಾ ಇಂತಹ ಸಮಸ್ಯೆ ಇರಲಿಲ್ಲ. ಹಿಂದೂ-ಮುಸ್ಲಿಂ ಎಲ್ಲರೂ ಸ್ನೇಹಿತರಂತೆ ಇದ್ದೆವು. ಎಲ್ಲ ಜಾತಿ, ಧರ್ಮ ಗೌರವಿಸಬೇಕು. ಈಗ ಕಾಲೇಜಿನಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ತುಂಬಾ ನೋವಾಗುತ್ತಿದೆ. ಹಿಜಾಬ್ ಈಗಷ್ಟೇ ಅಲ್ಲ. ನಮ್ಮ ಮಧ್ಯೆ ಮನಸ್ತಾಪ ಬೇಡ, ಎಲ್ಲರೂ ಚೆನ್ನಾಗಿ ಉತ್ತಮ ಸ್ನೇಹಿತರಾಗಿ ಇರೋಣ’ ಎಂದು ವಿದ್ಯಾರ್ಥಿನಿ ನಿರೋಷಾ ಮನವಿ ಮಾಡಿಕೊಂಡರು.
ಪದವಿ ಕಾಲೇಜಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಕಾಲೇಜಿಗೆ ಮೊದಲಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದರು. ಆದರೆ, ಇವತ್ತು ಶಾಲು ಹಾಕಿಕೊಂಡು ಬಂದಿದ್ದಾರೆ. ಕಾಲೇಜಿನಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ. ಕಾಲೇಜು ಸಮಿತಿಯ ಸಭೆ ಕರೆದು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕಾಲೇಜು ಪ್ರಾಚಾರ್ಯ ಪ್ರಕಾಶ್ ಹೊಸಮನಿ ತಿಳಿಸಿದರು.