ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಇಂದು ವಾರ್ಡ್ ನಂ.35 ರ ಭೈರಿದೇವರಕೊಪ್ಪದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 8 ಕೋಟಿ ಅನುದಾನದಲ್ಲಿ ಎರಡು ಸಣ್ಣ ಸೇತುವೆ ಒಳಗೊಂಡಂತೆ ಭೈರಿದೇವರಕೊಪ್ಪ – ಮಾರಡಗಿ, ಭೈರಿದೇವರಕೊಪ್ಪ – ಸೋಮಾಪುರ ಜಿಲ್ಲಾ ಮುಖ್ಯ ರಸ್ತೆ ಸುಧಾರಣಾ ಕಾಮಗಾರಿಗಳು ಹಾಗೂ ಭೈರಿದೇವರಕೊಪ್ಪ – ಸದಾಶಿವ ನಗರದ 24*7 ಕುಡಿಯುವ ನೀರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಸ್ತೆಗಳನ್ನು ಡಾಂಬರೀಕರಣ ಮಾಡುವುದರಿಂದ ಮನೆಯಿಂದ ಹೊಲಗಳಿಗೆ ಸರಾಗವಾಗಿ ಓಡಾಡಬಹುದು. ಅಲ್ಲದೇ ಬೆಳೆದ ಬೆಳೆಗಳನ್ನು ಸುಲಭವಾಗಿ ಸಾಗಿಸಬಹುದು. ರಸ್ತೆಗಳು ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಜಿ. ಗುಂಡಳ್ಳಿ, ಮುಖಂಡರಾದ ಮಲ್ಲಿಕಾರ್ಜುನ ಸಾವ್ಕಾರ, ಮೋಹನ್ ಶೆಟ್ಟರ್, ಬಿ. ಸಿ. ಪಾಟೀಲ್, ಬಸವರಾಜ ಚಿಕ್ಕಮಠ, ನಿಂಗಪ್ಪ ಗುಡ್ಡಪ್ಪನವರ,
ಪಂಚಾಕ್ಷರಿ ಪಂಚಯ್ಯನವರಮಠ್, ಮುತ್ತು ಹೆಬ್ಬಳ್ಳಿ, ಬಸವರಾಜ ಕುರುಬಗಟ್ಟಿ, ನಂದೀಶ್ ಗುಂಡೂರ್, ಲಿಂಗಣ್ಣ ಕುರುಬಗಟ್ಟಿ, ಲಕ್ಷ್ಮಣ ಕಾನೋಜಿ, ಉಳವಪ್ಪ ಪರಸನ್ನವರ, ಶಂಕರಯ್ಯ ಹಿರೇಮಠ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.