*ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಪ್ರತಿಭಟನೆ
ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಹಾಗೂ ಡೋಣಿ ತಾಂಡಾ (ಕಪೋತಗಿರಿ), ಅತ್ತಿಕಟ್ಟಿ ದಿಂಡೂರು ಮತ್ತು ಕಪ್ಪತ್ತಗುಡ್ಡದ ಸುತ್ತಮುತ್ತಲಿನ ರೈತರು ಬಗರ್ ಹುಕುಂ ಹಕ್ಕಿಗಾಗಿ ನಡೆಯುವ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಸೋಮವಾರ ರಾತ್ರಿ ತೆರಳಿದರು. ಜಿಲ್ಲೆಯಿಂದ ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಭಾಗವಹಿಸಲಿದ್ದಾರೆ.
ಈ ಗ್ರಾಮಗಳ ರೈತರು 1938ರಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಇದುವರೆಗೂ ಸರಕಾರದಿಂದ ಯಾವುದೇ ಹಕ್ಕುಪತ್ರವಾಗಲೀ, ಪಟ್ಟಾ ಆಗಲಿ ದೊರೆತಿಲ್ಲ. ಅರಣ್ಯ ಅಕ್ರಮ ಭೂಮಿಯನ್ನು 1980ರಲ್ಲಿ ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಂದ ಸರ್ವೆ ಮಾಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ 1983 ಮತ್ತು 1986 ರಲ್ಲಿ ಅರಣ್ಯ ಇಲಾಖೆಯು ಸರ್ವೆ ಮಾಡಿಸಿದ ದಾಖಲೆಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮುಚ್ಚಿ ಹಾಕಿದ್ದಾರೆಂದು ರೈತರು ಆರೋಪಿಸಿದ್ದಾರೆ.
2018ರಲ್ಲಿ ಸರಕಾರದ ಆದೇಶದಂತೆ ಹಕ್ಕುಪತ್ರ ವಿತರಣೆ ಸಲುವಾಗಿ ಗ್ರಾಮ ಪಂಚಾಯತಿ ಗ್ರ್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅರಣ್ಯ ಹಕ್ಕು ಸಮಿತಿಗೆ ಹಸ್ತಾಂತರಿಸಲಾಗಿತ್ತು. ಅರಣ್ಯ ಹಕ್ಕು ಸಮಿತಿಯವರು ಆಯ್ಕೆಯಾದ ಫಲಾನುಭವಿಗಳ ಅರ್ಜಿಯೊಂದಿಗೆ ಮುಂಡರಗಿ ತಹಸೀಲ್ದಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಹಸ್ತಾಂತರಿಸಲಾಗಿತ್ತು.
2001 -2002ರಲ್ಲಿ ಸರಕಾರದ ಆದೇಶದಂತೆ ಅರಣ್ಯ ಒತ್ತುವರಿದಾರ ರೈತರ ಭೂಮಿಯನ್ನು ಅರಣ್ಯ ಅಧಿಕಾರಿಗಳು ಜಿ ಪಿ ಸರ್ವೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸುವ ಕೆಲಸವನ್ನು ಮುಚ್ಚಿ ಹಾಕಿದ್ದಾರೆ. ಆದರೂ ಇದುವರೆಗೂ ಯಾವುದೇ ಹಕ್ಕು ಪತ್ರ, ಪಟ್ಟಾ ಆಗಲೀ ನೀಡಿಲ್ಲ. ಆದ್ದರಿಂದ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಿ ಪಟ್ಟಾ ದೊರಕಿಸಿಕೊಡಲು ಆಗ್ರಹಿಸಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಶಂಕರಗೌಡ ಜಾಯಿನಗೌಡರ್ ಹೇಳಿದ್ದಾರೆ.