ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಟ್ಟಣದ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆಯ ಪಕ್ಕದ ವಾರ್ಡ್ ನಂ-17 ರಲ್ಲಿ ಹೊಸದಾಗಿ ಬಾರ್ ಮತ್ತು ರೆಸ್ಟೊರೆಂಟ್ ಪ್ರಾರಂಭಿಸಲು ಅನುಮತಿ ನೀಡಬಾರದು. ಅಲ್ಲದೇ ಈ ಪ್ರದೇಶದಲ್ಲಿ ಈಗಾಗಲೇ ಇಲ್ಲಿರುವ ಡಾಬಾಗಳನ್ನು ತೆರವುಗೊಳಿಸಿ ಜನರು ನೆಮ್ಮದಿಯಿಂದ ಇರಲು ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ಸಂಘಟನೆಗಳು ಬುಧವಾರ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಪಟ್ಟಣದ ಜನ ವಸತಿ ಪ್ರದೇಶದಲ್ಲಿ ಮೂರ್ನಾಲ್ಕು ಡಾಬಾಗಳು ಹಗಲೂ-ರಾತ್ರಿ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಅಲ್ಲದೇ ಇಲ್ಲಿ ದೇವಸ್ಥಾನ, ಶಾಲೆ, ಬಾಲಕ-ಬಾಲಕಿಯರ ಹಾಸ್ಟೆಲ್ಗಳಿವೆ. ಕಾರಣ ಇಲ್ಲಿ ಬಾರ್, ರೆಸ್ಟೋರೆಂಟ್ ಮತ್ತು ಲಾಡ್ಜ್ ಪ್ರಾರಂಭಿಸಲು ಅನುಮತಿ ನೀಡಬಾರದು. ಇರುವುದನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಅಧ್ಯಕ್ಷ ಸುರೇಶ ಹಟ್ಟಿ, ಎನ್.ವ್ಹಿ.ಪಡಗೇರಿ, ಎಲ್.ಎನ್.ಶರಸೂರಿ, ಭರಮಪ್ಪ ಶರಸೂರಿ, ಮಂಜುನಾಥ ಹವಳಣ್ಣವರ ಇದ್ದರು.