ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ
ಶಿರಹಟ್ಟಿ ತಾಲೂಕಿನ ಛಬ್ಬಿ ತಾಂಡಾದ ರೈತರು ಬೆಳೆದ ಮೆಕ್ಕೆಜೋಳವನ್ನು ಖರೀದಿದಾರರು ಖರೀದಿಸಿ ರೈತರಿಗೆ ಬರಬೇಕಾದ ಹಣವನ್ನು ಇಲ್ಲಿಯವರೆಗೂ ಕೊಟ್ಟಿರುವದಿಲ್ಲ. ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಎಸ್ಸಿ/ಎಸ್ಟಿ ದೌರ್ಜನ್ಯ ಸಮಿತಿ ನಾಮನಿರ್ದೇಶಿತ ಸದಸ್ಯ ಜಾನು ಲಮಾಣಿ ಹಾಗೂ ಮಹೇಶ ಲಮಾಣಿ ನೇತೃತ್ವದಲ್ಲಿ ತಹಸೀಲ್ದಾರ ಕೆ.ಆರ್.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಾನು ಲಮಾಣಿ, ಮಹೇಶ ಲಮಾಣಿ, 2-12-2022ರಂದು ಹಾವೇರಿ ಜಿಲ್ಲೆಯ ಶಿವಕುಮಾರ ಬಣಕಾರ ಎಂಬುವವರು ನಮ್ಮ ಗ್ರಾಮದ ರೈತರಿಗೆ ಪ್ರತಿ ಕ್ವಿಂಟಾಲ್ಗೆ ೨೧೫೦ ರೂ.ಗಳಂತೆ ಖರೀದಿ ಮಾಡುವುದಾಗಿ ೧೫ ದಿನಗಳ ಒಳಗಾಗಿ ಹಣವನ್ನು ಕೊಡುತ್ತೇನೆ ಎಂದು ಒಪ್ಪಿ ರೈತರಿಂದ ಮೆಕ್ಕೆಜೋಳವನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಹಣ ಕೇಳಿದರೆ ಸುಳ್ಳು ಭರವಸೆಗಳನ್ನು ನೀಡುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರಿಂದ ರೈತರಿಗಾದ ಅನ್ಯಾಯವನ್ನು ಸರಿಪಡಿಸಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕೆಂದು ಮನವಿ ಮೂಲಕ ಆಗ್ರಹಿಸಿದ್ದಾರೆ.
ಈ ಕೂಡಲೇ ಪೋಲೀಸ್ ಇಲಾಖೆಯ ಅಧಿಕಾರಿಗಳು ಇಂತಹವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮೋಸಕ್ಕೆ ಒಳಗಾದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಿಜೆಪಿ ಯುವ ಮುಖಂಡ ಮಹೇಶ ಲಮಾಣಿ ಒತ್ತಾಯಿಸಿದರು.
ಗಂಗವ್ವ ಅಂಗಡಿ, ಚನ್ನಪ್ಪ ಪವಾರ, ಕೊಟ್ರೇಶ ಲಮಾಣಿ, ಕೇಶಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ಸಕ್ರಪ್ಪ ಲಮಾಣಿ, ರವಿ ಲಮಾಣಿ, ಮಂಜುನಾಥ ಭಜಂತ್ರಿ, ಮಾನಪ್ಪ ನಾಯಕ ರಾಮಪ್ಪ ಲಮಾಣಿ, ಮಲ್ಲೇಶ ಲಮಾಣಿ, ಪಾಂಡಪ್ಪ ಲಮಾಣಿ, ಮಂಜುನಾಥ ವಡ್ಡರ ಮುಂತಾದವರು ಉಪಸ್ಥಿತರಿದ್ದರು.