ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಸದಸ್ಯರಾಗಿ ಇತ್ತೀಚೆಗಷ್ಟೇ ಆಯ್ಕೆಗೊಂಡಿರುವ 18 ವಾರ್ಡಿನ ಕಾಂಗ್ರೆಸ್ ಸದಸ್ಯ ಜೈಲಾಲುದ್ದೀನ ಅಲಿಯಾಸ್ ಜೀವನಸಾಬ ಅಲಿಯಾಸ್ ಜೂನಸಾಬ ನಮಾಜಿ ಜನಪ್ರತಿನಿಧಿಯಾಗಿದ್ದರೂ ತಮ್ಮ ಗೂಂಡಾಗಿರಿ ಪ್ರವೃತ್ತಿ ಮುಂದುವರೆಸಿದ್ದಾರೆ. ಈ ಬಗ್ಗೆ ಮಹಿಳೆಯೋರ್ವರು ನಗಸರಸಭೆ ಸದಸ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಡಿ.28 ರಂದೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಜವಳಗಲ್ಲಿಯ ಜೈಲಾಲುದ್ದೀನ ಅಲಿಯಾಸ್ ಜೀವನಸಾಬ ಅಲಿಯಾಸ್ ಜೂನಸಾಬ ನಮಾಜಿ(ಎ-1), ಹುಸೇನಸಾಬ ಜೈನಾಪುರ(ಎ-2), ತನ್ವೀರ್ (ಎ-3), ಆಸೀಫ್ ಕರಮುಡಿ (ಎ-4), ಅಬ್ದುಲ್ ಅಣ್ಣಿಗೇರಿ (ಎ-5) ಐವರ ಮೇಲೆ ಗದಗ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಮಹಿಳೆಯೋರ್ವಳ ಕುಟುಂಬದ ಮೇಲೆ ದ್ವೇಷ ಸಾಧಿಸುತ್ತಿದ್ದ ಜೂನಸಾಬ ನಮಾಜಿ ಕಳೆದ ಡಿ.28ರಂದು ನಾಯಿ ಕಚ್ಚಿದೆ ಎಂದು ಸುಳ್ಳು ಆಪಾದನೆ ಮಾಡಿದ್ದನಂತೆ. ಆಗ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ. ಆದರೆ, ಇಷ್ಟಕ್ಕೆ ಸುಮ್ಮನಾಗದ ಆರೋಪಿ ಜೂನಸಾಬ ನಮಾಜಿ ತನ್ನ ಸಂಗಡಿಗರೊಂದಿಗೆ ಮಹಿಳೆಯ ಮನೆಯೊಳಗೆ ನುಗ್ಗಿ ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೇ, ಮಹಿಳೆಯರು ಎನ್ನದೇ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.
ಈ ಹಿಂದೆ ಜೂನಸಾಬ ನಮಾಜಿ ಕತ್ತಿ (ತಲ್ವಾರ್) ಝಳಪಳಿಸುವ ಮೂಲಕ ಸುದ್ದಿಯಾಗಿದ್ದರು. ಇದೀಗ ಅದೇ ಪ್ರವೃತಿ ಮುಂದುವರೆಸಿದ್ದು, ಇವರೇನಾ ಜನಪ್ರತಿನಿಧಿ ಎಂದು ಅವಳಿ ನಗರದ ಜನತೆ ಆಡಿಕೊಳ್ಳುತ್ತಿದ್ದಾರೆ.