ದಾರ್ಮಿಕ ಆಚರಣೆ ದುರ್ಬಳಕೆ ಆರೋಪ…..
ವಿಜಯಸಾಕ್ಷಿ ಸುದ್ದಿ, ಗದಗ
ರಾಜ್ಯ ವಿಧಾನಸಭೆಗೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾರ್ಮಿಕ ಸ್ಥಳಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ಚುನಾವಣಾ ಆಯೋಗ ಕಾನೂನು ರೂಪಿಸಿದೆ.
ಮೊನ್ನೆ ನಡೆದ ಗದಗನ ಜಗದ್ಗುರು ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದಲ್ಲಿ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ, ಬಿಜೆಪಿ ಪಕ್ಷದ ಉಷಾ ಮಹೇಶ್ ದಾಸರ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದು ತೇರಿಗೆ ಎಸೆಯುವ ಬಾಳೆ ಹಣ್ಣಿನ ಮೇಲೆ ಶಿರಹಟ್ಟಿ ಕ್ಷೇತ್ರದ ಶಾಸಕಿ ಉಷಾ ಮಹೇಶ್ ದಾಸರ ಅಂತ ಬರೆದು, ಅದರ ಪೋಟೋ ತಗೆದು ರಾಜಕೀಯ ಪ್ರಚಾರ ಮಾಡಿ, ದಾರ್ಮಿಕ ಆಚರಣೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.

ಅದಷ್ಟೆ ಅಲ್ಲದೆ ಆ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಇದನ್ನು ನೋಡಿದ ಸಾರ್ವಜನಿಕರು ಲೈಕ್ ಹಾಗೂ ಕಾಮೆಂಟ್ ಮಾಡಿದ್ದರಿಂದ ಉಷಾ ಮಹೇಶ್ ದಾಸರ ಇವರು, ನನ್ನನ್ನು ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ಶಾಸಕಿಯನ್ನಾಗಿ ನೋಡಲು ನಿತ್ಯ ಪ್ರಾರ್ಥಿಸುತ್ತಿರುವ ಜನರ ಆತ್ಮಾಭಿಮಾನಕ್ಕೆ, ಪ್ರೀತಿಗೆ ತಲೆಬಾಗಿ ನಮಿಸುವೆ. ನಿನ್ನೆಯ ದಿವಸ ತೋಂಟದಾರ್ಯ ಮಠದ ಜಾತ್ರೆಯ ಸಂದರ್ಭದ ಈ ಸನ್ನಿವೇಶ ತಿಳಿದು/ಕಂಡು ನನಗೆ ಭಾವೋಧ್ವೇಗದಲ್ಲಿ ಪದಗಳೆ ಹೊರಡುತ್ತಿಲ್ಲಾವೆಂದು ಧನ್ಯವಾದವನ್ನು ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ವಿವರಿಸಲಾಗಿದೆ.
ಈ ಕುರಿತು ಗದಗನ ಚುನಾವಣಾ ವಿಚಕ್ಷಣ ದಳದ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಂತೋಷ ತಂದೆ ನೀಲಕಂಠ ಹಂದಿಗನೂರ ಎಂಬುವರು ಶಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
RELIGIOUS INSTITUTIONS (PREVENTION OF MISUSE) ACT 1988(u/s-7 ಅಡಿಯಲ್ಲಿ c/r no-0035/2023 ಪ್ರಕರಣ ದಾಖಲಾಗಿದೆ.