ಕೆಲಸದ ಒತ್ತಡದಲ್ಲಿ ನಾಮಫಲಕದ ಬಗ್ಗೆ ಗಮನಹರಿಸಿರಲಿಲ್ಲ; ಕಾಂಬಳೆ
ವಿಜಯಸಾಕ್ಷಿ ಸುದ್ದಿ, ನವಲಗುಂದ: ಈ ಮೊದಲು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು, ನಮಗೆಲ್ಲಾ ಪ್ರತಿ ಗ್ರಾಮಕ್ಕೂ ಶುದ್ದ ಕುಡಿಯುವ ನೀರು ಪೂರೈಸಬೇಕೆಂದು ಗಡುವು ಕೊಟ್ಟಿದ್ದರು. ಆ ಕೆಲಸದಲ್ಲಿ ನಾವೆಲ್ಲರೂ ಮಗ್ನರಾಗಿದ್ದೇವು, ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಬದಲಾಗಿದ್ದ ನಾಮಫಲಕವನ್ನು ಬದಲಿಸುವಲ್ಲಿ ಸ್ವಲ್ಪ ವಿಳಂಭವಾಗಿದ್ದು ನಿಜ. ವಿಜಯಸಾಕ್ಷಿ ಪತ್ರಿಕೆಯವರು ಗಮನಕ್ಕೆ ತಂದ ತಕ್ಷಣ ತಪ್ಪನ್ನು ತಿದ್ದುಕೊಂಡಿದ್ದೇವೆಂದು ತಾಲ್ಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ ಅನಿಸಿಕೆ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಂಕರ ಪಾಟೀಲ ಮುನೇನಕೊಪ್ಪ ಅವರು ಬೇರೆ ಜಿಲ್ಲೆಯ ಉಸ್ತುವಾರಿಗಳಾಗಿದ್ದರೂ ಅವರ ಜನಸಂಪರ್ಕ ಕಾರ್ಯಾಲಯದ ನಾಮಫಲಕದಲ್ಲಿ ಇನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಏಪ್ರಿಲ್ 8 ರಂದು ವಿಜಯಸಾಕ್ಷಿ ವೆಬ್ ಪೋರ್ಟಲ್ ಹಾಗೂ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.


ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಈಗ ಶಂಕರ ಪಾಟೀಲ ಮುನೇನಕೊಪ್ಪ ಅವರು ರಾಯಚೂರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆಂದು ಬದಲಾಯಿಸಿ ಹೊಸದಾಗಿ ನಾಮಫಲಕನ್ನು ಅಳವಡಿಸಿದ್ದಾರೆ.
ಈ ತಪ್ಪಿನ ಕುರಿತು ತಾಲ್ಲೂಕಾ ಬಿಜೆಪಿ ಅಧ್ಯಕ್ಷರಾದ ಎಸ್.ಬಿ.ದಾನಪ್ಪಗೌಡರ ಪತ್ರಿಕೆಗೆ ಸ್ಪಷ್ಟನೆ ನೀಡಿದ್ದು, ನಮ್ಮ ಶಂಕರ ಪಾಟೀಲ ಮುನೇನಕೊಪ್ಪ ಅವರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬದಲಾಗಿದ್ದು ನಮಗೆಲ್ಲರಿಗೂ ತಿಳಿದಿತ್ತು. ಆದರೆ ಅವರು ನಮಗೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ನಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ನಾವು ನಾಮ ಫಲಕ ಬದಲಾಯಿಸುವಲ್ಲಿ ಮೈಮರೆತಿದ್ದೇವು. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದ ವಿಜಯಸಾಕ್ಷಿ ಪತ್ರಿಕೆಯವರು ನಮ್ಮ ಗಮನಕ್ಕೆ ತಂದ ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ ಫಲವಾಗಿ ಹೊಸದಾಗಿ ನಾಮಫಲಕವನ್ನು ಬದಲಾಯಿಸಲಾಗಿದೆ.
ತಪ್ಪು ಯಾರೇ ಮಾಡಿದರೂ ತಪ್ಪೇ, ಆದರೆ ಅದನ್ನು ಗಮನಕ್ಕೆ ತಂದ ವಿಜಯಸಾಕ್ಷಿ ಪತ್ರಿಕೆಯವರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇವೆಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.