ಧರಣಿ, ರ್ಯಾಲಿ ಮತ್ತು ಮುಷ್ಕರ ನಿರ್ಬಂಧ…. ಕೋವಿಡ್ ಲಸಿಕೆ ಕಡ್ಡಾಯ
ವಿಜಯಸಾಕ್ಷಿ ಸುದ್ದಿ, ಗದಗ:
ಇಂದಿನಿಂದ ರಾತ್ರಿ 10 ರಿಂದ ಜ.19ರ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಹಾಗೂ ಶುಕ್ರವಾರ (ಜ.6)ದಿಂದ ರಾತ್ರಿ 10 ರಿಂದ ಸೋಮವಾರ ಬೆಳಗಿನ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಆದೇಶಿಸಿದ್ದಾರೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅನುಸಾರ ಗದಗ ಜಿಲ್ಲೆಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಪ್ಯೂ ಮುಂದುವರೆಸಲಾಗಿದೆ. ಜ.19ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳು ವಾರದಲ್ಲಿ ಐದು ದಿನ ಕಾರ್ಯನಿರ್ವಹಿಸಲಿವೆ.
ಅದರಂತೆ, ಪಬ್, ಕ್ಲಬ್, ರೆಸ್ಟೋರೆಂಟ್, ಬಾರ್, ಹೋಟೆಲ್, ಚಿತ್ರಮಂದಿರ, ರಂಗಮಂದಿರ, ಸಭಾಭವನಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೇ, ಕೋವಿಡ್ನ ಎರಡೂ ಲಸಿಕೆ ಪಡೆದವರಿಗಷ್ಟೇ ಪ್ರವೇಶಕ್ಕೆ ಅವಕಾಶ ಇರಲಿದೆ.
ಮದುವೆ ಸಮಾರಂಭಗಳಲ್ಲಿ ಹೊರಾಂಗಣದಲ್ಲಿ 200, ಒಳಾಂಗಣದಲ್ಲಿ 100 ಜನರು ಮೀರಬಾರದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ಯಾವುದೇ ಸೇವೆ ಇತ್ಯಾದಿಗಳಿಗೆ ಅವಕಾಶವಿಲ್ಲ. ಜಿಲ್ಲೆಯ ವಾಣಿಜ್ಯ ಸಂಕೀರ್ಣಗಳು, ಎಲ್ಲಾ ಏಕ ಕಟ್ಟಡದಲ್ಲಿನ ಅಂಗಡಿಗಳು ಮತ್ತು ವಾಣಿಜ್ಯ ಸ್ಥಳಗಳು ವಾರದಲ್ಲಿ 5 ದಿನ ಕಾರ್ಯನಿರ್ವಹಿಸಬೇಕು.
ಈಜುಕೊಳ, ಜಿಮ್, ಕ್ರೀಡಾ ಸಂಕೀರ್ಣ, ಆಟದ ಮೈದಾನಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶ ಇರಲಿದೆ. ಜಿಲ್ಲೆಯಲ್ಲಿ ಯಾವುದೇ ರ್ಯಾಲಿ, ಧರಣಿ, ಮುಷ್ಕರಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.