ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ನಾಡಿಗೆ ದೊಡ್ಡ ನಾಗರಪಂಚಮಿ ಹಬ್ಬದ ದಿನ ಎಲ್ಲೆಡೆ ಕಲ್ಲ ನಾಗರ ಮೂರ್ತಿಗೆ ಹಾಲೆರೆಯುವದು ಸಾಮಾನ್ಯ. ಪ್ರತ್ಯಕ್ಷವಾಗಿ ಕಂಡರೆ ಜೀವಭಯದಲ್ಲಿ ಮಾರುದ್ಧ ಜಿಗಿಯುವರೇ ಹೆಚ್ಚು, ಮತ್ತು ನಾಗದೇವರೆಂದು ಪೂಜಿಸಿ ಕೈಮುಗಿದು ದೂರ ಹೋಗುವರುಗೇನು ಕಡಿಮೆ ಇಲ್ಲ.
ಆದರೆ ನಾಗರಪಂಚಮಿ ದಿನವೇ ಎರಡು ಕಡೆ ನಾಗರ ಹಾವುಗಳು ಪ್ರತ್ಯಕ್ಷವಾಗಿದ್ದು, ನಾಗರಹಾವಿಗೆ ಹಾಲಿನ ಬದಲು ನೀರು ಕುಡಿಸಿ ಸರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬರಲಾಗಿದೆ. ಹಾಲಿನ ಬದಲಿಗೆ ಹಾವಿಗೆ ನೀರು ಕುಡಿಸಿದ ಲಕ್ಷ್ಮೇಶ್ವರ ಪಟ್ಟಣದ ಸಾಗರ ಧರಣಿ ಎಂಬ ಭೂಪನೇ ಅಂತಹ ಸಾಹಸ ಮೆರೆದಾತ.
ಪಟ್ಟಣದ ಜಂತ್ಲಿ ಬಸವೇಶ್ವರ ದೇವಸ್ಥಾನದ ಹೊಸಮನಿ ಎಂಬುವರ ಮನೆಯಲ್ಲಿ ಸುಮಾರು ೫/೬ ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಹಾವು ನೋಡಿದ ಮನೆಯವರು ಗಾಬರಿಗೊಂಡಿದ್ದಾರೆ. ದೂರದಿಂದಲೇ ಭಕ್ತಿಯಿಂದ ಪೂಜೆ ಮಾಡಿ ಹೊರ ಹೋಗುವಂತೆ ಪ್ರಾರ್ಥಿಸಿದ್ದಾರೆ. ಅಷ್ಟಾರಲ್ಲಾಗಲೇ ಸಾಗರಗೆ ಪೋನ್ ಮುಖಾಂತರ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ ಬಿಎಲ್ಓ ಕರ್ತವ್ಯಕ್ಕೆ ಗೈರು: ಗ್ರಾಮ ಆಡಳಿತ ಅಧಿಕಾರಿ ಶಿರೂರು ಸಸ್ಪೆಂಡ್; ಡಿಸಿ ಆದೇಶ
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಾಗರ, ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ಸೆಪ್ಟಿಕಲ್ ಕೋಬ್ರಾ ಎನ್ನಲಾಗುವ ನಾಗರಹಾವನ್ನು ತಮ್ಮ ಚಾಣಾಕ್ಷತದಿಂದ ತನ್ನ ಹಿಡಿತಕ್ಕೆ ತೆಗೆದುಕೊಂಡು ಕೆಲಹೊತ್ತು ಆಟವಾಡಿಸಿ ಬಾಟಲಿಯಿಂದ ನೀರು ಕುಡಿಸಿ ಬಳಿಕ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾನೆ.
ಕೆಲ ಹೊತ್ತಿನ ಬಳಿಕ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿತಾಂಡಾದ ಮನೆಯಲ್ಲಿ ನಾಗರಹಾವು ಬಂದಿದೆ ಎಂಬ ಸುದ್ದಿ ತಿಳಿದು ಅಲ್ಲಿಗೂ ತೆರಳಿದ ಸಾಗರ ಧರಣಿ, ಅದನ್ನು ಸಹ ಕ್ಷಣಾರ್ಧದಲ್ಲಿಯೇ ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾನೆ. ಯುವಕನ ಧೈರ್ಯ ಮತ್ತು ಬುದ್ದಿವಂತಿಕೆಯಿಂದ ಹಾವನ್ನು ಹಿಡಿಯುತ್ತಿರುವದನ್ನು ನೋಡಿದ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದುವರೆಗೂ ಹತ್ತಾರು ಜಾತಿಯ ಅನೇಕ ಹಾವುಗಳನ್ನು ಹಿಡಿದು ಹಲವಾರು ಕುಟುಂಬಗಳ ನೆಮ್ಮದಿಗೆ ಕಾರಣವಾಗಿರುವ ಸಾಗರ ಧರಣಿ ಸ್ನೇಕ ಸಾಗರ ಎಂದೇ ತಾಲೂಕಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ನಾಗದೇವತೆಗಳನ್ನು ಆತನನ್ನು ಕಾಪಾಡಲಿ ಎಂಬುದು ಸ್ಥಳೀಯರು ಹಾರೈಸಿದ್ದಾರೆ.