ಮಧ್ಯಾಹ್ನ 12 ಆದರೂ ಬಾಗಿಲು ತಗೆಯದ ಆರೋಗ್ಯ ಕೇಂದ್ರ……..?
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಬಾಲೆಹೊಸೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮಧ್ಯಾಹ್ನ 12 ಗಂಟೆಯಾದರೂ ಬಾಗಿಲು ತೆರೆಯದ್ದರಿಂದ ಆಕ್ರೋಶಗೊಂಡ ಶಾಸಕ ರಾಮಣ್ಣ ಲಮಾಣಿ ತಾಲೂಕಾ ವೈದ್ಯಾಧಿಕಾರಿ, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.
ಬಾಲೆಹೊಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸಿಬ್ಬಂದಿಗಳ ವಸತಿಗೃಹ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಶಾಸಕರು ಆಗಮಿಸಿದ್ದರು. ಇನ್ನೂ ತೆರೆಯದೇ ಇರುವ ಆಸ್ಪತ್ರೆಯ ಬಾಗಿಲ ಮುಂದೆ ಅನೇಕ ವಯೋವೃದ್ಧರು, ಮಹಿಳೆಯರು ಆರೋಗ್ಯ ಚಿಕಿತ್ಸೆಗಾಗಿ ಕಾಯುತ್ತಾ ಕುಳಿತಿದ್ದರು. ಇದನ್ನು ಗಮನಿಸಿದ ಶಾಸಕರು ಸಿಟ್ಟಿನಿಂದಲೇ ತಾಲೂಕಾ ವೈದ್ಯಾಧಿಕಾರಿ ಅವರಿಗೆ ಪೋನ್ ಮಾಡಿ ದಬಾಯಿಸಿದರು.
ಸ್ವಲ್ಪ ಸಮಯಕ್ಕೆ ಆಸ್ಪತ್ರೆಗೆ ಆಗಮಿಸಿದ ವೈದ್ಯ ಡಾ.ಸಚಿನ್ ಮತ್ತು ಸಿಬ್ಬಂದಿಗೆ ನಿಮಗೆ ಕಿಂಚಿತ್ತಾದರೂ ಸಮಯಪ್ರಜ್ಞೆ, ರೋಗಿಗಳ ಬಗ್ಗೆ ಕಾಳಜಿ ಇಲ್ಲವೇ? ಇಲ್ಲಿ ಜನರು ಕಾಯುತ್ತಾ ಕುಳಿತಿದ್ದಾರೆ, ಕಷ್ಟ-ಸುಖ ಕೇಳುವವರು ಯಾರೂ ಇಲ್ಲವೆಂದುಕೊಂಡಿರಾ? ಹೀಗೆ ಬೇಜವಾಬ್ದಾರಿಯಿಂದ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುವದನ್ನು ಸಹಿಸುವುದಿಲ್ಲ. ಇನ್ನೊಂದು ಬಾರಿ ಇಂತಹ ಘಟನೆಗಳು ಮರುಕಳಿಸಿದರೆ ನಿಮ್ಮ ಮೇಲೆ ಸೂಕ್ತ ಕ್ರಮಕ್ಕೆ ಸೂಚಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವೈದ್ಯರು ಮತ್ತು ಸಿಬ್ಬಂದಿಗಳು ಆಗಿರುವ ಸಮಸ್ಯೆಗೆ ವಿಷಾದ ವ್ಯಕ್ತಪಡಿಸಿ ಈ ರೀತಿಯಾಗದಂತೆ ಕೆಲಸ ಮಾಡುವದಾಗಿ ಹೇಳಿದರು. ಈ ಸಂದರ್ಭದಲ್ಲಿ ಹಿರಿಯರಾದ ಕರಿಯಪ್ಪ ಮೈಲಾರಿ, ಲಕ್ಷ್ಮವ್ವ ಗಾಣಿಗೇರ, ಬಸವಣ್ಣೆಪ್ಪ ಗೊಂಡೇದ, ಬಸಪ್ಪ ಮಾಯಕೊಂಡ, ನಾಗಯ್ಯ ಮಠಪತಿ, ಎಂ.ಬಿ. ಚಪ್ಪರಮನಿ ಸೇರಿ ಹಲವರಿದ್ದರು.